ಕೆಲವು ತಿಂಗಳುಗಳಿಂದ ಬಹು ಕೆಟ್ಟ ರೀತಿಯಲ್ಲಿ ಸುದ್ದಿ ಮಾಡಿದ್ದ ರಫೇಲ್ ಒಪ್ಪಂದ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಕೇಂದ್ರ ಸರ್ಕಾರಕ್ಕೆ ಖುಷಿ ಕೊಟ್ಟರೆ, ಕಾಂಗ್ರೆಸ್ಸಾದಿಗಳಿಗೆ ಕೋಪ ಬರಿಸಿದೆ. ತೀರ್ಪು ತಪ್ಪೆಂದೂ, ತಾವದನ್ನು ಒಪ್ಪುವುದಿಲ್ಲವೆಂದೂ ರಾಹುಲ್ ಗಾಂಧಿ ಮೊದಲಾದ ಜನನಾಯಕರು ಅರಚುತ್ತಿದ್ದಾರೆ. ಇವರೆಲ್ಲರೂ ಬಿಜೆಪಿಯು ನ್ಯಾಯಾಲಯಗಳಿಗೆ, ಅವುಗಳ ತೀರ್ಪುಗಳಿಗೆ ಬೆಲೆ ಕೊಡದ ಪಕ್ಷವೆಂದು ಶಬರಿಮಲೆ, ರಾಮಜನ್ಮಭೂಮಿ, ಗೋಹತ್ಯೆ ಮುಂತಾದ ಪ್ರಕರಣಗಳ ತೀರ್ಪುಗಳನ್ನು ಮುಂದಿಟ್ಟುಕೊಂಡು ಸಿಕ್ಕಾಪಟ್ಟೆ ದೂರುತ್ತಿದ್ದಾರೆ. ಆದರೆ ಈಗ ಇವರು ಮಾಡುತ್ತಿರುವುದಾದರೂ ಏನು?
ತಮ್ಮ ವಿರುದ್ಧ ಬರುವ ಯಾವ ತೀರ್ಪನ್ನೂ ಯಾವ ಫಲಾನುಭವಿಯೂ ಇತ್ತೀಚಿನ ದಿನಗಳಲ್ಲಿ ಒಪ್ಪುತ್ತಿಲ್ಲ. ಕಾರ್ಯಾಂಗವಾಗಲೀ ಜನಸಾಮಾನ್ಯನಾಗಲೀ ನ್ಯಾಯಾಂಗದ ವಿರುದ್ಧ ಮಾತಾಡಿದರೆ ನಿಂದನೆ ಪ್ರಕರಣ ತಕ್ಷಣ ದಾಖಲಾಗುವಾಗ, ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕಾದ ಶಾಸಕಾಂಗವೇ ಹೀಗೆ ಬೀದಿಯಲ್ಲಿ ನಿಂತು ‘ಅನ್ಯಾಯ’ ಎಂದರೆ ನ್ಯಾಯಾಲಯಗಳ ಗತಿ ಏನಾಗಬೇಡ?
ಹಾಗಾಗಿ ನನ್ನ ಸಲಹೆ ಇಷ್ಟೇ, ತೀರ್ಪಿನ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶಗಳು ಇದ್ದರೂ ಹಾಗೆ ಮಾಡದೆ, ಬಾಯಿಗೆ ಬಂದಂತೆ ಮಾತಾಡುವವರು ಯಾರೇ ಆಗಿದ್ದರೂ ನ್ಯಾಯಾಲಯಗಳು ಸ್ವಯಂ ದೂರು ದಾಖಲಿಸಿ ಕೊಂಡು ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಿ, ಜೈಲಿಗೆ ಕಳಿಸಿದಾಗ ಮಾತ್ರ ನ್ಯಾಯಾಂಗದ ಮೇಲಿನ ವಿಶ್ವಾಸ ಉಳಿದೀತು.
ಎನ್. ನರಹರಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.