ಅಂಗವಿಕಲರಿಗೆ ಆಹಾರ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ, ಅಂತ್ಯೋದಯ ಅನ್ನ ಯೋಜನೆಯಡಿ ಸೌಲಭ್ಯ ಪಡೆಯುವ ಅವಕಾಶವನ್ನು ಅವರಿಗೆ ಕಲ್ಪಿಸಲಾಗಿದೆ. ಆದರೆ ರಾಜ್ಯದ ಕೆಲವೇ ಅಂಗವಿಕಲರು ಈ ಸೌಲಭ್ಯ ಪಡೆದುಕೊಳ್ಳಲು ಸಫಲರಾಗಿದ್ದಾರೆ. ಉಳಿದವರಿಗೆ ಇದು ಮರೀಚಿಕೆಯಾಗಿದೆ. ಏಕೆಂದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದ ಪ್ರಕಾರ, ಈ ಯೋಜನೆಯು ಕೇಂದ್ರ ಸರ್ಕಾರದ ನಿರ್ದಿಷ್ಟ ಸಂಖ್ಯೆ ಮಿತಿಯುಳ್ಳ ಯೋಜನೆಯಾಗಿದ್ದು, ಯಾವುದೇ ಫಲಾನುಭವಿಯು ಪಟ್ಟಿಯಿಂದ ಖಾಲಿಯಾದಲ್ಲಿ ಮಾತ್ರ ಹೊಸ ಫಲಾನುಭವಿಯನ್ನು ಸೇರಿಸಲು ಸಾಧ್ಯವಾಗುತ್ತದೆ. ಇದನ್ನು ಗಮನಿಸಿದರೆ, ಒಬ್ಬ ಅಂಗವಿಕಲ ಬದುಕುವುದಕ್ಕಾಗಿ ಆಹಾರ ಭದ್ರತೆಯ ತನ್ನ ಹಕ್ಕನ್ನು ಪಡೆದುಕೊಳ್ಳಲು ಮತ್ತೊಬ್ಬ ಅಂಗವಿಕಲನ ಸಾವನ್ನು ಬಯಸಬೇಕಾಗಿದೆ.
ಕೊರೊನಾ ಸೋಂಕಿನ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇಂತಹ ಆದೇಶಗಳು ಶೋಭೆ ತರುವುದಿಲ್ಲ. ಅಂಗವಿಕಲರಿಗೂ ಬದುಕುವ ಹಕ್ಕಿದೆ, ಅವರದೇ ಆದ ಬದುಕಿದೆ ಎಂದು ಅರಿತು ರಾಜ್ಯ ಸರ್ಕಾರ ಎಲ್ಲ ಅಂಗವಿಕಲರಿಗೂ ಅಂತ್ಯೋದಯ ಅನ್ನ ಯೋಜನೆಯನ್ನು ವಿಸ್ತರಿಸಲಿ. ಫಲಾನುಭವಿಗಳ ಸೀಮಿತ ಸಂಖ್ಯೆ ಮೀರಿದ ವೆಚ್ಚವನ್ನು ಸರ್ಕಾರ ಭರಿಸಲಿ. ಈಗಾಗಲೇ ದೈಹಿಕ ಹಾಗೂ ಮಾನಸಿಕವಾಗಿ ನೊಂದಿರುವ ಅಂಗವಿಕಲರ ಬದುಕು ಹಸಿವಿನಿಂದ ಅಂತ್ಯ ಕಾಣದಂತೆ ಆಗದಿರಲಿ.
ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.