ADVERTISEMENT

ವಾಚಕರವಾಣಿ: ಸೃಜನಶೀಲ ಮನಸ್ಸಿಗೆ ಸ್ಪಂದಿಸಲಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:31 IST
Last Updated 12 ನವೆಂಬರ್ 2021, 19:31 IST

ಕನ್ನಡದ ಅಸ್ಮಿತೆಗಳಲ್ಲಿ ಒಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಹತ್ತಿರವಾಗುತ್ತಿದೆ. ಹೊಸದಾಗಿ ಆಯ್ಕೆಯಾಗಲಿರುವ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು ಪರಿಷತ್ತಿಗೆ ಹೊಸ ಸ್ಪರ್ಶ ನೀಡುವ ಆಲೋಚನೆ ಮಾಡಬೇಕಿದೆ. ಕಸಾಪ ಎಂದರೆ ಸಾಹಿತ್ಯ ಸಮ್ಮೇಳನ ನಡೆಸುವುದು ಎಂಬ ಭಾವನೆ ಹೋಗಲಾಡಿಸಿ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತಾಗಿ ಅರ್ಥಪೂರ್ಣ ಚಟುವಟಿಕೆಗಳಿಗೆ ಚಾಲನೆ ನೀಡಬೇಕಿದೆ. ತುಂಬಾ ಪ್ರಸ್ತುತ ಆದರೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಜಿಲ್ಲಾ ಘಟಕಗಳು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕಾರ್ಯಾಗಾರಗಳನ್ನು ನಡೆಸಬಹುದು. ಯುವ ಬರಹಗಾರರನ್ನು ಗುರುತಿಸಿ ಸೃಜನಶೀಲ ಬರಹಗಳಿಗೆ ಪ್ರೋತ್ಸಾಹ ನೀಡಬಹುದು.

ಸಾಹಿತ್ಯ ಸಮ್ಮೇಳನಗಳ ಖರ್ಚು- ವೆಚ್ಚದ ವಿವರಗಳನ್ನು ಕಾಲಮಿತಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸುವ ಬಗ್ಗೆ ಜಿಲ್ಲಾ- ತಾಲ್ಲೂಕು ಘಟಕಗಳ ಅಧ್ಯಕ್ಷರು ಸ್ವಯಂ ನಿಯಮ ಹಾಕಿಕೊಂಡಲ್ಲಿ ಪಾರದರ್ಶಕತೆ ಕಾಯ್ದುಕೊಂಡಂತೆ ಆಗುತ್ತದೆ. ಕಸಾಪವು ಸಾಹಿತ್ಯದ ಸೂಕ್ಷ್ಮ ಸಂವೇದನೆಗಳನ್ನು ಉಳಿಸಿಕೊಂಡ ಸೃಜನಶೀಲ ಮನಸ್ಸುಗಳಿಗೆ ಸ್ಪಂದಿಸಿ ಅರ್ಥಪೂರ್ಣ ಹೆಜ್ಜೆಗಳನ್ನಿಡಲಿ.

- ನಾಗರಾಜ ಹೆಗಡೆ,ಕುಮಟಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.