ADVERTISEMENT

ವಾಚಕರ ವಾಣಿ | ಮಾಜಿ ಸೈನಿಕರ ಸಮಸ್ಯೆ ನಿವಾರಣೆಗೆ ಸಿಗಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 22:00 IST
Last Updated 11 ಆಗಸ್ಟ್ 2022, 22:00 IST

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರ ಶಿವಾನಂದ ರೆಡ್ಡಿ ಎಂಬುವರು ಕಾಶ್ಮೀರದ ಪೂಂಚ್‌ನಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ಕಾಲಿಗೆ ಪೆಟ್ಟಾಗಿ, ಸೇನೆಯಿಂದ ನಿವೃತ್ತರಾದ ಮೇಲೆ, ನಿವೃತ್ತ ಯೋಧರಿಗೆ ಆದ್ಯತೆಯ ಮೇಲೆ ಸಿಗಬೇಕಾದ ಜಮೀನಿಗೆ ಅರ್ಜಿ ಸಲ್ಲಿಸಿ, ಕಳೆದ 22 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲವಂತೆ. ಇದೀಗ ಈ ಅಂಗವಿಕಲ ಮಾಜಿ ಸೈನಿಕ ತನಗೆ ಸಿಗಬೇಕಾದ 5 ಎಕರೆ ಜಮೀನಿನ ಸಲುವಾಗಿ ಮುಖ್ಯಮಂತ್ರಿಯವರ ಬಳಿಗೆ ಪಾದಯಾತ್ರೆ
ಹೊರಟಿದ್ದಾರೆ ಎಂದು ವರದಿಯಾಗಿದೆ.

ದೇಶ ರಕ್ಷಣೆಯ ಸಂದರ್ಭದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬದವರು ಹಾಗೂ ಅಂಗವಿಕಲರಾದವರು ಈ ರೀತಿ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತಿಗಾಗಿ ಅನೇಕ ವರ್ಷಗಳಿಂದ ಕಾಯುತ್ತಿರುವುದು ನಿಜಕ್ಕೂ ದುರಂತ. ದೇಶರಕ್ಷಣೆಯ ಸಲುವಾಗಿ ದಣಿವರಿಯದೆ ದುಡಿಯುತ್ತಿರುವವರನ್ನು ಸ್ಮರಿಸುವ ಸಲುವಾಗಿ ‘ಹರ್ ಘರ್ ತಿರಂಗಾ’ ಅಭಿಯಾನ ಆಚರಣೆಗೆ ಸಂಕಲ್ಪ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ, ದೇಶದಾದ್ಯಂತ ಈ ರೀತಿ ತಮಗೆ ಸಿಗಬೇಕಾದ ಸವಲತ್ತಿಗಾಗಿ ಅಲೆದಾಡುತ್ತಿರುವ ಮಾಜಿ ಸೈನಿಕರನ್ನು ಗುರುತಿಸಿ, ಅವರ ಸಮಸ್ಯೆಯನ್ನು ಆದ್ಯತೆಯ ಮೇಲೆ ಪರಿಹರಿಸಲು ಕ್ರಮ ಕೈಗೊಂಡರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ.

ಡಾ. ಟಿ.ಜಯರಾಂ,ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.