ADVERTISEMENT

ಜನಮನ ಗೆಲ್ಲಬಲ್ಲ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 5:35 IST
Last Updated 22 ಮೇ 2019, 5:35 IST
   

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ನಾಳೆ ಸಂಭ್ರಮಾಚರಣೆ ನಡೆಯಲಿದೆ. ವಾದ್ಯ, ಕುಣಿತ, ಸಿಹಿ ವಿತರಣೆ, ಪಟಾಕಿ ಅಬ್ಬರ ಕಾಣಬಹುದು. ದಯವಿಟ್ಟು ಎಲ್ಲೂ ಪಟಾಕಿ ಸುಡಬೇಡಿ. ಕರ್ಕಶ ಸದ್ದು, ಕೆಟ್ಟ ವಾಸನೆ, ಕಸದ ರಾಶಿ ಹೊಮ್ಮದಂತೆ ಸಂಭ್ರಮಿಸಿ. ಅದು ಸಾಧ್ಯವಿದೆ.

ತಮ್ಮ ನಾಯಕನ ಗೆಲುವಿನ ನೆನಪಿಗಾಗಿ ಇಂಥಿಂಥ ಒಳ್ಳೆಯ ಕೆಲಸ ಮಾಡುತ್ತೇವೆ ಎಂಬ ಫಲಕ ಹಿಡಿದು ನರ್ತಿಸಿ ಬೇಕಿದ್ದರೆ. ಫಲಕಗಳ ಮೇಲೆ ‘ಬಸ್ ನಿಲ್ದಾಣ ಚೊಕ್ಕಟ ಮಾಡುತ್ತೇವೆ’, ‘ರಕ್ತದಾನ ಮಾಡುತ್ತೇವೆ’, ‘ಕೆರೆ ಹೂಳೆತ್ತುತ್ತೇವೆ’, ‘ನೂರು ಗಿಡ ನೆಡುತ್ತೇವೆ’, ‘ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಂಚುತ್ತೇವೆ’, ‘ಮೂಕ ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆ ಮಾಡುತ್ತೇವೆ’, ‘ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹಿಸುತ್ತೇವೆ’, ‘ಬೀದಿತ್ಯಾಜ್ಯ ನಿರ್ಮೂಲನೆ ಮಾಡುತ್ತೇವೆ’ ಅಥವಾ ‘ಮೊದಲ ಮಳೆಗೆ ಬೀಜಗೋಲಿ ಬಿತ್ತರಣೆ ಮಾಡುತ್ತೇವೆ, ‘ಸರ್ಕಾರಿ ಕಟ್ಟಡಗಳಲ್ಲಿ ಮಳೆಸಂಗ್ರಹ ಮಾಡುತ್ತೇವೆ’ ಇತ್ಯಾದಿ ಸದ್ಭಾವನಾ ಫಲಕ ಹಿಡಿದು ಟಿ.ವಿ ಕ್ಯಾಮೆರಾಗಳ ಎದುರು ಪ್ರದರ್ಶಿಸಬಹುದು. ಗೆಲ್ಲುವ ಭರವಸೆಯುಳ್ಳ ನಾಯಕರು ತಮ್ಮ ಅಭಿಮಾನಿ ಕಾರ್ಯಕರ್ತರಿಗೆ ಇಂದೇ ಸೂಚನೆ ಕೊಟ್ಟರೆ ಇದು ಸಾಧ್ಯವಾಗುತ್ತದೆ. ಇವೆಲ್ಲಕ್ಕಿಂತ ಉತ್ತಮ ಐಡಿಯಾ ಹೊಳೆದೀತೋ ನೋಡಿ.

ಟಿ.ವಿ ಸುದ್ದಿ ವಾಹಿನಿಗಳಿಗೆ ನನ್ನ ವಿನಂತಿ: ‘ಪಟಾಕಿ ಸುಡುವ ದೃಶ್ಯಗಳನ್ನು ನಾಳೆ ತೋರಿಸುವುದಿಲ್ಲ’ ಎಂದು ಇಂದು ಸಂಜೆಯೇ ಘೋಷಣೆ ಮಾಡಿ. ಪಟಾಕಿ ಸುಡುವಲ್ಲಿ ನಿಮ್ಮ ವಾಹಿನಿಯ ಕ್ಯಾಮೆರಾ ಇರಬಾರದೆಂದು ವರದಿಗಾರರಿಗೆ ಸೂಚನೆ ಕೊಡಿ. ದೇಶದ ಇತರೆಲ್ಲ ರಾಜ್ಯಗಳಿಗೂ ಮಾದರಿಯಾಗುವಂಥ ಒಂದು ಉತ್ತಮ ಆರಂಭ ಇದಾಗಬಹುದು. ಅಂತಹ ಅಪರೂಪದ ಅವಕಾಶ ನಾಳೆ ಬರಲಿದೆ.

ADVERTISEMENT

–ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.