ADVERTISEMENT

ವಾಚಕರ ವಾಣಿ: ಪ್ರಕೃತಿಯ ವಿದ್ಯಮಾನಕ್ಕೆ ಸಲ್ಲದ ಅರ್ಥ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 18:35 IST
Last Updated 17 ಜನವರಿ 2021, 18:35 IST

ಈ ಬಾರಿಯ ಸಂಕ್ರಾಂತಿಯಂದು ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳದೇ ಇದ್ದದ್ದಕ್ಕೆ ಮೋಡಗಳು ಅಡ್ಡ ಬಂದದ್ದೇ ಕಾರಣ ಎಂಬ ಸುದ್ದಿ(ಪ್ರ.ವಾ., ಜ. 15) ಸತ್ಯ ಮತ್ತು ವೈಜ್ಞಾನಿಕವಾದದ್ದು. ವಿಪರ್ಯಾಸವೆಂದರೆ, ವಿಜ್ಞಾನ ಎಷ್ಟೇ ಬೆಳೆದರೂ ಪ್ರಕೃತಿಯಲ್ಲಿನ ಸಾಮಾನ್ಯ ಘಟನೆಗಳಿಗೆ ಸಲ್ಲದ ಅರ್ಥ ಕಲ್ಪಿಸುವ ವಾತಾವರಣಕ್ಕೆ ಕೆಲವು ಮಾಧ್ಯಮಗಳು ಕಾರಣವಾಗುತ್ತಿವೆ.

ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳದೇ ಇದ್ದದ್ದು ಅಪಾಯದ ಸಂದೇಶ, ಅಷ್ಟೇ ಅಲ್ಲ ಇದರಿಂದ ಯುದ್ಧ ನಡೆಯುವ ಮುನ್ಸೂಚನೆ ಇದೆ ಎಂಬಂಥ ಅಭಿಪ್ರಾಯ ಇದ್ದ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಅಲ್ಲದೆ ಇಡೀ ದಿನ ಕಾರ್ಯಕ್ರಮವನ್ನು ಪದೇ ಪದೇ ಪುನರಾವರ್ತಿಸಲಾಯಿತು. ಸೂರ್ಯ ಕಿರಣಗಳ ಪ್ರಸರಣವಾಗುವುದು ಪ್ರಕೃತಿ ನಿಯಮ. ಹಾಗೆಯೇ ಮೋಡ ಅಡ್ಡ ಬಂದಾಗ ಕಿರಣಗಳು ಮರೆಯಾಗುವುದು ಸಹಜ. ಹೀಗೆ ಸಂಭವಿಸುವ ಪ್ರಕೃತಿಯ ವಿದ್ಯಮಾನವನ್ನು ನೋಡುವುದೇ ವಿಸ್ಮಯ. ಈ ವರ್ಷ ಸೂರ್ಯರಶ್ಮಿ ಕಾಣದೇ ಇದ್ದದ್ದರಿಂದ ಪ್ರಕೃತಿಪ್ರಿಯರಿಗೆ ಹಾಗೂ ದೇವರಲ್ಲಿ ನಂಬಿಕೆ ಇರುವ ಭಕ್ತರಿಗೆ ನಿರಾಸೆಯಾದದ್ದು ನಿಜ. ಇದು ನಂಬಿಕೆ. ಹಾಗಾಗಿ ಪ್ರಶ್ನೆಗೆ ನಿಲುಕುವಂತಹದ್ದಲ್ಲ. ಆದರೆ ಜನರ ಇಂತಹ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು,
ಈ ವಿದ್ಯಮಾನವು ಅಪಾಯದ ಮುನ್ಸೂಚನೆ ಎಂದು ಜನಸಾಮಾನ್ಯರನ್ನು ಹೆದರಿಸಿ ನಿದ್ದೆಗೆಡಿಸುವುದು
ಒಪ್ಪುವಂಥದ್ದಲ್ಲ.

ಡಾ. ಜಿ.ಬೈರೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.