ಶಾಲೆಯಲ್ಲಿ ನೀತಿ ಪಾಠ ಅಳವಡಿಸಲು ಸರ್ಕಾರ ಚಿಂತನೆ ನಡೆಸಿರುವ ಕುರಿತು ‘ನೀತಿ: ಯಾರಿಂದ ಯಾರು ಕಲಿಯಬೇಕು?’ ಎಂಬ ಅಬ್ದುಲ್ ರೆಹಮಾನ್ ಪಾಷ ಅವರ ಲೇಖನವನ್ನು (ಸಂಗತ, ಪ್ರ.ವಾ., ಏ. 23) ಓದಿದೆ.
ಸರಿ, ಆದರೆ ಹಾಗೆಂದು ನಮ್ಮ ಶಾಲೆಗಳಲ್ಲಿ ನೈತಿಕ ಶಿಕ್ಷಣ ನೀಡುವ ನೈತಿಕ ಹಕ್ಕು ಸರ್ಕಾರಕ್ಕೆ ಇಲ್ಲವೆಂದು ಭಾವಿಸಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದನ್ನೇ ನಿರಾಕರಿಸುವುದು ಸರಿಯಲ್ಲ. ಸರ್ಕಾರ ಭ್ರಷ್ಟವಾಗಿರುವುದು ನಿಜ. ಆದರೆ ಶಾಲೆಯಲ್ಲಿ ಕಲಿಯುತ್ತಿರುವ ಭಾವಿ ಪ್ರಜೆಗಳು ನಮ್ಮ ಮಕ್ಕಳೇ ಅಲ್ಲವೆ?! ಅವರಿಗೆ ನೈತಿಕ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸುವ ಹೊಣೆ ನಮ್ಮ ಶಾಲೆಗಳ ಮೇಲಿದೆ. ಆದ್ದರಿಂದ ನಮ್ಮ ಜನಪದ ಕಥೆಗಳು, ಪರಿಸರ ಸಂರಕ್ಷಣಾ ಮಾಹಿತಿ ನೀಡುವ ಕಥೆಗಳು, ದೇಶಭಕ್ತರ ಕಥೆಗಳನ್ನು ಒಳಗೊಂಡ ನೈತಿಕ ಶಿಕ್ಷಣದ ಅಗತ್ಯ ಇಂದು ತುರ್ತಾಗಿ ಆಗಬೇಕಿದೆ.
ನಮ್ಮ ಸಂವಿಧಾನದ ಜಾತ್ಯತೀತ ಮೌಲ್ಯವನ್ನು ಕಡ್ಡಾಯವಾಗಿ ಕಲಿಸಬೇಕಾದ ಅಗತ್ಯವೂ ಇದೆ. ಸರ್ಕಾರ ನೈತಿಕ ಶಿಕ್ಷಣ ನೀಡಲು ಮುಂದಾಗಿರುವಾಗ ಈ ಥರದ ಪಠ್ಯವನ್ನು ರೂಪಿಸಬೇಕು. ಅದರಿಂದ ಮಾತ್ರ ನಮ್ಮ ಭವಿಷ್ಯವನ್ನು ನಾವು ಉಜ್ವಲಗೊಳಿಸಬಹುದು.
→ಹುರುಕಡ್ಲಿಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.