ADVERTISEMENT

ವಾಚಕರ ವಾಣಿ: ಆರ್‌ಬಿಐ ಶ್ಲಾಘನೀಯ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST

ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟುಗಳ ಮೇಲೆ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಸಂತಸದ ವಿಷಯ. ಟ್ಯಾಗೋರ್‌ ಮತ್ತು ಕಲಾಂ ಅವರು ಭಾರತ ಕಂಡ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಾದರೂ ಮಹಾತ್ಮ ಗಾಂಧಿ ಅವರ ಸ್ಥಾನವನ್ನು ತುಂಬಲಾರರು.

ಈ ರೀತಿಯ ಬದಲಾವಣೆ ಭವಿಷ್ಯದಲ್ಲಿ ಕೋಲಾಹಲಕ್ಕೆ ಅವಕಾಶ ನೀಡುತ್ತದೆ. ಪ್ರತಿಯೊಂದು ಜಾತಿ ಜನಾಂಗವೂ ತಮ್ಮ ತಮ್ಮ ಧರ್ಮಗುರುವಿನ ಅಥವಾ ಮಠಾಧೀಶರ ಭಾವಚಿತ್ರಗಳನ್ನು ನೋಟಿನ ಮೇಲೆ ಮುದ್ರಿಸುವಂತೆ ಒತ್ತಾಯಿಸಬಹುದು. ಅಲ್ಲದೆ ಮಹಾತ್ಮರ ಭಾವಚಿತ್ರ ಬದಲಾವಣೆಯ ಹಿಂದೆ ಮತೀಯವಾದಿ ಜನರ ಕುತಂತ್ರ ಇರುವ ಸಾಧ್ಯತೆಗಳೂ ಇರಬಹುದು. ಈಗ ಬದಲಾವಣೆಯಾದರೆ ಮುಂದೊಂದು ದಿನ ತಮ್ಮ ಧಾರ್ಮಿಕ ನಾಯಕ ಅಥವಾ ರಾಜಕೀಯ ಮುಖಂಡನ ಚಿತ್ರವನ್ನು ಮುದ್ರಿಸಲು ಅವಕಾಶ ದೊರೆಯುವುದೆಂಬ ದೂರದೃಷ್ಟಿ ಇರಬಹುದು. ಇವೆಲ್ಲಕ್ಕೂ ತೆರೆ ಎಳೆದಿರುವ ರಿಸರ್ವ್ ಬ್ಯಾಂಕಿನ ಕ್ರಮ ಅಭಿನಂದನಾರ್ಹ.

-ಮೋದೂರು ಮಹೇಶಾರಾಧ್ಯ, ಹುಣಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.