ADVERTISEMENT

ಶಂಕೆ ಮೂಡಿಸುತ್ತಿದೆ ‘ಕಾರ್ಯನಿರತ’ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:30 IST
Last Updated 7 ಜುಲೈ 2020, 19:30 IST

ರೈತರಿಗೆ ಕನಿಷ್ಠ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸಮರ್ಪಕ ನಿರ್ವಹಣೆಗಾಗಿ ಕೃಷಿ ಇಲಾಖೆಯ ವೆಬ್‌ಸೈಟ್‌‌ ಹಾಗೂ ಅಪ್ಲಿಕೇಷನ್‍ಗಳಲ್ಲಿ ನೀಡಲಾಗಿರುವ ಸಹಾಯವಾಣಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ. ಎಷ್ಟು ಬಾರಿ ಪ್ರಯತ್ನಿಸಿದರೂ ಮೂರು ದೂರವಾಣಿಗಳ ಪೈಕಿ ಒಂದು ಸದಾ ‘ಕಾರ್ಯನಿರತ’, ಇನ್ನುಳಿದ ಎರಡು ಸಂಖ್ಯೆಗಳು ‘ಚಾಲ್ತಿಯಲ್ಲಿಲ್ಲ’ ಎಂಬ ಉತ್ತರ ಬರುತ್ತಿದೆ. ಕೆಲಸದ ವೇಳೆಯನ್ನು ಹೊರತುಪಡಿಸಿ ಕರೆ ಮಾಡಿದಾಗಲೂ ಸಹಾಯವಾಣಿ ಸಂಖ್ಯೆಯು ‘ಕಾರ್ಯನಿರತ’ವಾಗಿರುವುದನ್ನು ನೋಡಿದರೆ, ಉದ್ದೇಶಪೂರ್ವಕವಾಗಿಯೇ ಈ ರೀತಿಯ ವ್ಯವಸ್ಥೆ ಮಾಡಿರಬಹುದೆಂಬ ಅನುಮಾನ ಬರುತ್ತದೆ.

ಕೆಲವು ತಾಂತ್ರಿಕ ಕಾರಣಗಳಿಂದ ಎಷ್ಟೋ ಅರ್ಹ ರೈತರಿಗೆ ಈ ಯೋಜನೆಯ ಲಾಭ ಇನ್ನೂ ಸಮರ್ಪಕವಾಗಿ ತಲುಪಿಲ್ಲ. ಕೆಲವು ರೈತರ ಹೆಸರುಗಳು ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದರೂ ಹಣ ಮಾತ್ರ ಸಂದಾಯವಾಗಿಲ್ಲ. ಇಂತಹ ಹಲವಾರು ಗೊಂದಲಗಳಿರುವ ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದರೆ, ಅವು ಕಾರ್ಯ ನಿರ್ವಹಿಸದಿರುವುದು ರೈತರಲ್ಲಿ ಬೇಸರ ಉಂಟುಮಾಡಿದೆ. ಯೋಜನೆಯ ಉದ್ದೇಶ ಸಾಕಾರಗೊಳ್ಳಬೇಕಾದರೆ, ಸಹಾಯವಾಣಿ ಸಮಸ್ಯೆಯನ್ನು ನಿವಾರಿಸಿ, ಅರ್ಹ ರೈತರಿಗೆ ಯೋಜನೆಯ ಲಾಭ ತಲುಪುವಂತೆ ಮಾಡಬೇಕು.

- ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.