ADVERTISEMENT

ವಾಚಕರ ವಾಣಿ | ಕಲ್ಯಾಣ ಕಾರ್ಯ: ಆತ್ಮಾವಲೋಕನ ಆಗಲಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:30 IST
Last Updated 2 ಸೆಪ್ಟೆಂಬರ್ 2022, 19:30 IST

ಭಾರತೀಯ ಗರ್ಭಿಣಿ ಪ್ರವಾಸಿ ತೀವ್ರ ಅನಾರೋಗ್ಯಕ್ಕೀಡಾದಾಗ, ಸಕಾಲಿಕವಾಗಿ ಆರೋಗ್ಯ ಸೇವೆಗಳು ಲಭ್ಯವಾಗದೇ ಮೃತಪಟ್ಟ ಕಾರಣದಿಂದ, ಪೋರ್ಚುಗಲ್‌ ಆರೋಗ್ಯ ಸಚಿವರ ರಾಜೀನಾಮೆ ಪಡೆದ ಪ್ರಸಂಗ ದೊಡ್ಡ ಗಮನಾರ್ಹ ಸುದ್ದಿ. ಇಂತಹ ಪ್ರಸಂಗಗಳಿಂದ ನೈತಿಕತೆ, ಸ್ವಾಭಿಮಾನ, ಮಾನವೀಯತೆ ಇರುವವರು ಕಲಿಯಬೇಕಾದದ್ದು ಬಹಳಷ್ಟಿದೆ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದು ಎಂದು ಗುರುತಿಸಿಕೊಂಡಿರುವ ಪೋರ್ಚುಗಲ್‌, ಆರೋಗ್ಯ ರಕ್ಷಣೆಗೆ ಹೆಚ್ಚು ಮುತುವರ್ಜಿ ವಹಿಸಿದ ರಾಷ್ಟ್ರ. ಸದ್ಯ ರಾಜೀನಾಮೆ ನೀಡಿರುವ ಸಚಿವೆ ಕೋವಿಡ್‌ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಹೆಸರಾಗಿದ್ದವರು.

ಈ ಪ್ರಕರಣದಿಂದ ಒಂದು ರಾಷ್ಟ್ರ ಹೇಗೆ ಘನತೆ, ಗೌರವಕ್ಕೆ, ಮಾನವೀಯತೆಗೆ ಮಾನ್ಯತೆ ನೀಡುತ್ತದೆ, ಮಾನವಾಭಿವೃದ್ಧಿ ಸೂಚ್ಯಂಕಗಳ ಕುರಿತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೇಗೆ ಮುಂಚೂಣಿ ನೆಲೆಯಲ್ಲಿ ನಿಲ್ಲುತ್ತವೆ ಎಂಬುದು ಬಹಿರಂಗವಾಗಿದೆ. ನಮ್ಮಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳ ಹೆಸರಿನಲ್ಲಿ ಕೋಟ್ಯಂತರ ಹಣ ಪ್ರತಿವರ್ಷ ವಿನಿಯೋಗವಾಗುತ್ತದೆ. ಆದರೆ, ದೇಶದಲ್ಲಿನ ಎಷ್ಟೋ ಮಂದಿ ಸಾಕ್ಷರರಿಗೂ ಶಿಕ್ಷಣ, ಆರೋಗ್ಯ ಸಂಪನ್ಮೂಲಗಳು, ಲಿಂಗತ್ವದಂತಹ ವಿಷಯಗಳಿಗೆ ಇರುವ ಆದ್ಯತೆ, ಕಾರ್ಯಕ್ರಮಗಳು, ಸೇವೆ, ಸವಲತ್ತುಗಳ ಕುರಿತು ಮಾಹಿತಿ ಇರುವುದಿಲ್ಲ. ತಂತ್ರಜ್ಞಾನ ಮುಂದುವರಿದಿದ್ದರೂ ಇಂತಹ ಪರಿಸ್ಥಿತಿ ಇರುವುದು ದುರದೃಷ್ಟಕರ. ಆಡಳಿತ ವ್ಯವಸ್ಥೆಯು ಸ್ಪಂದನಶೀಲವಾಗಬೇಕಿದೆ. ಜನಪರ ಕಲ್ಯಾಣ ಕಾರ್ಯಗಳನ್ನು ರೂಪಿಸುವಲ್ಲಿ, ಅನುಷ್ಠಾನ ಮಾಡುವಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಕಂಡುಕೊಳ್ಳುವಲ್ಲಿನ ಪ್ರಕ್ರಿಯೆ ಹಾಗೂ ಕಾರ್ಯತಂತ್ರಗಳ ಕುರಿತು ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.

-ಸಿ.ವಿಜಯಕುಮಾರ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT