
ಬೇಸಿಗೆ ಶುರುವಾಗಿದೆ. ಹಬ್ಬಿದ ಕಾಳ್ಗಿಚ್ಚು, ಬಣವೆ ಬೆಂಕಿಗಾಹುತಿ ಎಂಬ ಸುದ್ದಿಗಳು ಸಾಮಾನ್ಯವಾಗಿವೆ. ಕಾಡಿಗೆ ಬೆಂಕಿ ಬಿದ್ದರೆ ವನ್ಯಜೀವಿಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ; ಅಂತೆಯೇ ಸಾರ್ವಜನಿಕ ಆಸ್ತಿ ನಾಶವಾದರೆ ಜನರ ಬದುಕು ಬೀದಿಗೆ ಬೀಳುತ್ತದೆ. ಒಂದೆಡೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ತುರ್ತು ಸೇವೆಯಲ್ಲಿ ವಿಳಂಬವಾಗುತ್ತಿದೆ. ಪ್ರಸ್ತುತ ತಾಲ್ಲೂಕಿಗೊಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಠಾಣೆ ಇದೆ. ಇದರಿಂದ ಬೆಂಕಿ ಕಾಣಿಸಿಕೊಳ್ಳುವ ದೂರದ ಊರು ಗಳಿಗೆ ತಲಪಲು ಅಗ್ನಿ ಶಾಮಕ ವಾಹನಗಳಿಗೆ ಒಂದು ತಾಸಿಗೂ ಹೆಚ್ಚಿನ ಸಮಯ ಬೇಕು. ಅಷ್ಟರೊಳಗೆ ಎಲ್ಲವೂ ಸುಟ್ಟು ಬೂದಿಯಾಗುತ್ತದೆ. ಹಾಗಾಗಿ, ಪ್ರತಿ ಹೋಬಳಿಗೊಂದು ಅಗ್ನಿ ಶಾಮಕ ಠಾಣೆ ತೆರೆದರೆ ಉತ್ತಮ.
⇒ಸಂತೋಷ್ ಕುಮಾರ್ ಎಲ್., ಹಿರಿಯೂರು
ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಕಾಫಿತೋಟ ಗಳಲ್ಲಿ ಕೃಷಿ ಕಾರ್ಮಿಕರು ಕಾಡಾನೆಗಳ ದಾಳಿಗೆ ಬಲಿಯಾಗುತ್ತಿರುವುದು ಹೆಚ್ಚುತ್ತಿದೆ. ಅಭದ್ರತೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಜೀವನ ಮತ್ತು ಜೀವಕ್ಕೆ ರಕ್ಷಣೆ ಇಲ್ಲ. ದುಡಿಯುವ ಶ್ರಮಿಕರು ತೋಟಗಳಲ್ಲಿ, ಸ್ವಂತ ಜಮೀನುಗಳಲ್ಲಿ ಜೀವಭಯದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು ಸಮರ್ಪಕ ಸೌಕರ್ಯವಿಲ್ಲದೆ ಶೋಚನೀಯ ಸ್ಥಿತಿ
ಯಲ್ಲಿ ದುಡಿಯುತ್ತಿದ್ದಾರೆ. ದುಡಿದು ತಿನ್ನುವವರು ಕಾಡುಪ್ರಾಣಿಗಳಿಗೆ ಬಲಿಯಾಗು ತ್ತಿರುವುದು ನೋವಿನ ಸಂಗತಿ.
⇒ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಂತಹ ಘಟನೆಗಳು ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಹಲವು ಕ್ಷೇತ್ರಗಳಲ್ಲಿ ಕೆಲವು ಆಪ್ತ ಸಹಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡು ಶಾಸಕರಂತೆಯೇ ವರ್ತಿಸುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ದರ್ಪ ತೋರುವುದೂ ಉಂಟು.
ಜನರಿಗೆ ನ್ಯಾಯಯುತವಾಗಿ ಸರ್ಕಾರಿ ಸೌಲಭ್ಯ ತಲಪಬೇಕು. ಆದರೆ, ಹಣ ನೀಡುವ ವರಿಗೆ ಅಥವಾ ತಮ್ಮ ಇಷ್ಟದವರಿಗೆ ಅನುಕೂಲ ಕಲ್ಪಿಸುತ್ತಾರೆ. ಜನರು ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಇಂತಹವರ ವರ್ತನೆಗಳಿಂದ ನಿರಾಶರಾಗುತ್ತಿದ್ದಾರೆ. ಹಾಗಾಗಿ, ಆಪ್ತ ಸಹಾಯಕರ ಅಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ.
⇒ಪ್ರದೀಪ ಬಿಸಲನಾಯಿಕ, ಚಿಕ್ಕೋಡಿ
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ರಾಜಧಾನಿಯ ಕೆಲವೆಡೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ಕೆಲವು ಪ್ರದೇಶಗಳ ಚಿತ್ರಣವು ಇದಕ್ಕಿಂತ ಹೊರತಾಗಿಲ್ಲ. ಈ ವರ್ಷ ವಾಡಿಕೆಗಿಂತಲೂ ಬಿಸಿಲು ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರದ ಸ್ಥಿತಿ ತಲೆದೋರುವ ಸಾಧ್ಯತೆಯಿದೆ. ನಾಗರಿಕರು ಜಲಮೂಲ ಗಳ ಸಂರಕ್ಷಣೆಗೆ ಒತ್ತು ನೀಡಬೇಕು. ನೀರಿನ ಸದ್ಬಳಕೆಗೆ ಮುಂದಾಗಬೇಕು.
⇒ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು
ಹಿಂದಿ ಉತ್ತೇಜಿಸಿದರೆ ಎಲ್ಲ ಭಾಷೆಗಳಿಗೂ ಬಲ ಸಿಗಲಿದೆಯೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದು ಹಾಸ್ಯಾಸ್ಪದ. ಹಿಂದಿ ಮಾತನಾಡುವುದರಿಂದ ಇತರ ಭಾಷೆಗಳು ಗಟ್ಟಿಗೊಳ್ಳುವುದಿಲ್ಲ. ಮಾತೃಭಾಷೆಯನ್ನು ಉತ್ತೇಜಿಸಿದರಷ್ಟೆ ಉಳಿದೆಲ್ಲ ಭಾಷೆಗಳು ಗಟ್ಟಿಗೊಳ್ಳುತ್ತವೆ. ಆರಂಭದ ಶಿಕ್ಷಣ ಮಾತೃಭಾಷೆ ಮೂಲಕ ದಕ್ಕುವಂತಾದರೆ ಮಕ್ಕಳ ಕಲಿಕೆಗೆ ಭದ್ರಬುನಾದಿ ಸಿಕ್ಕಿದಂತಾಗುತ್ತದೆ. ತಾಯ್ನುಡಿ ಮೂಲಕ ಕಲಿತದ್ದು ನೇರವಾಗಿ ಎದೆಗಿಳಿಯುತ್ತದೆ. ಮಾತೃಭಾಷೆಯಲ್ಲಿ ಕಲಿಕೆಯ ಮೂಲಕ ಓದು–ಬರಹದಲ್ಲಿ ಸರಾಗ ಸಾಮರ್ಥ್ಯಗಳಿಸಿದ ನಂತರದ ಹಂತದಲ್ಲಿ ಹಿಂದಿ, ಇಂಗ್ಲಿಷ್ ಮತ್ಯಾವುದೇ ಭಾಷೆ ಕಲಿಯುವುದು ಸೂಕ್ತ. ಸಚಿವರು ಹೇಳಿದಂತೆ ಹಿಂದಿ ಉತ್ತೇಜಿಸುವುದರಿಂದ ಇತರ ಭಾಷೆಗಳು ಗಟ್ಟಿಗೊಳ್ಳುವುದಿಲ್ಲ; ಬದಲಿಗೆ ಅವು ಮೂಲೆಗುಂಪಾಗುತ್ತವೆ.
⇒ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
‘ಎಐ ಕಾಲದಲ್ಲಿ ಕವಿರಾಜಮಾರ್ಗ’ ಲೇಖನದಲ್ಲಿ (ಲೇ: ಅವಿನಾಶ್ ಗೋಪಾಲಕೃಷ್ಣ, ಪ್ರ.ವಾ., ಫೆ. 21) ಎತ್ತಿರುವ ಪ್ರಶ್ನೆಯು, ಎಐ ತಂತ್ರಜ್ಞಾನವು ತಂದೊಡ್ಡಬಹುದಾದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ. ಮಾತೃ ಭಾಷೆಗಳ ಮೇಲಿನ ಎಐ ಪರಿಣಾಮ ಕುರಿತು ಚರ್ಚೆ ನಡೆಯದಿರುವುದು ದುರದೃಷ್ಟಕರ. ಕಾರ್ಪೊರೇಟ್ ಮಾದರಿಯಡಿ ನಿರ್ಮಿತವಾದ ಈ ತಂತ್ರಜ್ಞಾನ ತಿಳಿದೋ ಅಥವಾ ತಿಳಿಯದೆಯೋ ಭಾಷಾ ವೈವಿಧ್ಯಕ್ಕೆ ಧಕ್ಕೆ ತರಲಿದೆ. ನೃಪತುಂಗನ ಕಾಲದಲ್ಲಿ ಭಾಷಾ ಬೌದ್ಧಿಕತೆ ಸಮುದಾಯದ ಆತ್ಮವಿಶ್ವಾಸವಾಗಿತ್ತು. ಇಂದಿನ ಕಾಲದಲ್ಲಿ ಅದೇ ಆತ್ಮವಿಶ್ವಾಸವನ್ನು ತಂತ್ರ ಜ್ಞಾನದಿಂದ ಬಲಪಡಿಸುವ ಹೊಣೆಗಾರಿಕೆ ನಮ್ಮದಾಗಿದೆ. ಎಐ ಹೊಸ ಸಾಮ್ರಾಜ್ಯವಾಗಬಾರದು; ಅದು ಬಹುಭಾಷಾ ಸೃಜನಶೀಲತೆಯ ಮತ್ತು ಬಹುತ್ವದ ವೇದಿಕೆಯಾಗಬೇಕು. ಹಾಗೆಯೇ ಮೂಲಭೂತವಾಗಿ ಭಾಷೆ
ಉದ್ಯೋಗದ ಸಾಧನವಲ್ಲ; ಅದು ನಾಗರಿಕತೆಯ ಚಿಂತನೆಯ ನೆಲೆ. ತಂತ್ರಜ್ಞಾನವು ವೈವಿಧ್ಯ ಮತ್ತು ಸೃಜನಶೀಲತೆಯನ್ನು ಕುಗ್ಗಿಸುವ ಶಕ್ತಿಯಾಗ ಬಾರದು; ಅದನ್ನು ಬಲಪಡಿಸುವ ಸಾಧನವಾಗಬೇಕು.
ಎಂ. ರವೀಂದ್ರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.