‘ಕಾಂಗ್ರೆಸ್: ನಿಶ್ಶಕ್ತಿ ನಿವಾರಣೆಗೆ ಬೇಕಿದೆ ಕಹಿ ಗುಳಿಗೆ’ ಸಂಪಾದಕೀಯ (ಪ್ರ.ವಾ., ಅ. 11) ಹಾಗೂ ‘ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ನಿರಾಕರಣೆ’ ಎಂಬ ಸುದ್ದಿ ಇಂದಿನ ಸನ್ನಿವೇಶಕ್ಕೆ ಪ್ರಸ್ತುತವಾಗಿವೆ. ದುರಂತವೆಂದರೆ, ಪಕ್ಷದಲ್ಲಿನ ಹಿರಿಯ ನಿಷ್ಠ ದಿಗ್ಗಜರು (23 ಮಂದಿ) ಪಕ್ಷವನ್ನು ಬಲಿಷ್ಠವಾಗಿಸಲು ‘ಪಕ್ಷದ ಸಭೆ ಕರೆಯಿರಿ, ಚರ್ಚೆ ಮಾಡೋಣ’ ಎಂದುದಕ್ಕೂ ಸಿದ್ಧರಾಗದ ಪಕ್ಷದ ತ್ರಿಮೂರ್ತಿಗಳು ಕಹಿ ಗುಳಿಗೆ ಸೇವಿಸುತ್ತಾರೆಯೇ? ಬದಲಾದಸನ್ನಿವೇಶದಲ್ಲಿ, ಅಧಿಕಾರ ವಿಕೇಂದ್ರೀಕರಣವಾಗದೆ ‘ಚಪ್ಪಾಳೆ ತಟ್ಟುವವರಿಗೆ ಮಾತ್ರ ಅವಕಾಶ’ ಎಂಬಂತಾಗಿದೆ. ಅಂದರೆ, ಒಂದು ಶಾಲೆಯ ಪ್ರಾಧ್ಯಾಪಕನ ಸ್ಥಾನಕ್ಕೆ, ಹಿರಿಯ ನುರಿತ ಅಧ್ಯಾಪಕರ ಬದಲು, ನಿವೃತ್ತ ಪ್ರಾಧ್ಯಾಪಕನ ಪುತ್ರನಿಗೇ ಪಟ್ಟ ಮೀಸಲು ಇಡುವಂತಾದರೆ, ಶಾಲೆ, ಮಕ್ಕಳು, ಶಿಕ್ಷಣದ ಗತಿ ಅಧೋಗತಿಗೆ ಹೋದಂತೆ ಆಗಿದೆ ಕಾಂಗ್ರೆಸ್ಸಿನ ಪರಿಸ್ಥಿತಿ. ಹಿಂದೆ, ಕಾಂಗ್ರೆಸ್ನಲ್ಲಿ ವಂಶಪಾರಂಪರ್ಯಕ್ಕೆ ತೂಕವಿದ್ದದ್ದು ದಿಗ್ಗಜರು, ಪಾಂಡಿತ್ಯ ಪಡೆದವರು, ಅರ್ಹತೆ ಇದ್ದವರು ಜನರ ಕಣ್ಮಣಿಗಳಾಗಿದ್ದಾಗ. ಈಗ, ಆಡಳಿತ ಪಕ್ಷವಾಗಿ ಬಿಜೆಪಿ ಬಲಿಷ್ಠವಾಗುತ್ತಲೇ ಹೋಗುತ್ತಿದ್ದರೂ ವಂಶಪಾರಂಪರ್ಯ ಆಡಳಿತ ನಡೆಸುತ್ತಿರುವವರು ಪಕ್ಷದ ಮೂಲಭೂತ ನಂಬಿಕೆಯನ್ನೇಗ್ರಹಿಸದೆ, ಹಿರಿಯರ ಅಭಿಪ್ರಾಯಕ್ಕೂ ಮಣಿಯದಂತೆ ಇರುವುದು ಸರಿಯೇ?
ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಿಡಿತ ಸಾಧಿಸಿರುವುದಕ್ಕೆ ಕಾರಣ, ಅವರಹಿರಿತನ, ಚಾಣಾಕ್ಷತೆ, ಮಾತಿನ ವರಸೆ, ಹೋರಾಟದ ನಿಲುವು, ಪಕ್ಷವನ್ನು ಬೆಳೆಸಿ ಎಲ್ಲರಿಂದ ಮಾನ್ಯತೆಪಡೆಯುತ್ತಿರುವ ವಿಶೇಷತೆ. ಇದನ್ನು ಅರಿಯದೆ, ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ತ್ರಿಮೂರ್ತಿಗಳು ಹಿರಿಯರನ್ನು ಕಡೆಗಣಿಸಿ, ‘ನಮ್ಮನ್ನು ಬೆಂಬಲಿಸದಿದ್ದರೆ, ಪಕ್ಷದಿಂದ ಹೊರನಡೆಯಿರಿ’ ಎಂಬಂತೆ ವರ್ತಿಸಿದರೆಪಕ್ಷ ಬೆಳೆಯುತ್ತದೆಯೇ? ಬೆಳಕಿನಲ್ಲೂ ಬಾವಿಗೆ ಬೀಳಲು ನಿಶ್ಚಯ ಮಾಡಿದವರನ್ನು ತಡೆಯುವುದಕ್ಕೆಆಗುವುದೇ?
-ಪಿ.ಸಿ.ಕೇಶವ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.