ಕನ್ನಡಿಗರ ಹಿತರಕ್ಷಣೆಯ ಸಲುವಾಗಿ ರಚನೆಯಾದಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಮೂಲ ಉದ್ದೇಶವನ್ನು ಮರೆತುಬಿಟ್ಟಿದೆ ಎಂದು ಕನ್ನಡಿಗರ ಉದ್ಯೋಗ ವೇದಿಕೆಯ ಸಂಸ್ಥಾಪಕಿ ವಿನುತಾ ಮೂಲಾ ಹೇಳಿದ್ದಾರೆ (ಪ್ರ.ವಾ., ಮೇ 8). ಪ್ರಾಧಿಕಾರವು 2017ರಲ್ಲೇ ಡಾ. ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಖಾಸಗಿ ಕ್ಷೇತ್ರದಲ್ಲಿ ಕರ್ನಾಟಕದವರಿಗೆ ಆದ್ಯತೆ ನೀಡುವ ಬಗ್ಗೆ ಈ ವರದಿಯಲ್ಲಿರುವ ಅಂಶಕ್ಕೆ ಈಗಾಗಲೇ ರಾಜ್ಯ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಇದರ ಜೊತೆಗೆ, ಕೇಂದ್ರ ಸರ್ಕಾರದ ವ್ಯಾಪ್ತಿಯ ಐಬಿಪಿಎಸ್, ಎಸ್ಎಸ್ಸಿ ತರಹದ ಕೇಂದ್ರ ಸರ್ಕಾರಿ ಉದ್ಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಬೇಕು, ಕನ್ನಡಿಗರಿಗೆ ಕರ್ನಾಟಕದ ಉದ್ಯೋಗಗಳಲ್ಲಿ ಹೆಚ್ಚಿನ ಪಾಲು ಸಿಗಲು ಪರೀಕ್ಷೆಯ ನಿಯಮ ಬದಲಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾಧಿಕಾರವು ಕೇಂದ್ರ ಸಚಿವರುಗಳಿಗೂ ಅನೇಕ ಬಾರಿ ಮನವಿ ಸಲ್ಲಿಸಿದೆ.
ಕಳೆದ ವರ್ಷ ಕೆಪಿಟಿಸಿಎಲ್ನಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾದ ಸಮಯದಲ್ಲಿ ನೇಮಕಾತಿ ನಿಲ್ಲಿಸಬೇಕೆಂದೂ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಪ್ರಾಧಿಕಾರವು ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕೆನ್ನುವ ಬಗ್ಗೆ ತನ್ನ ಕಾರ್ಯವ್ಯಾಪ್ತಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಲೇ ಬಂದಿದೆ. ಈ ವಿಚಾರಗಳನ್ನು ವಿನುತಾ ಅವರು ಗಮನಿಸಬೇಕು.
-ಅರುಣ್ ಜಾವಗಲ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.