ADVERTISEMENT

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:01 IST
Last Updated 7 ಮೇ 2019, 20:01 IST

ಕರ್ನಾಟಕ ಸರ್ಕಾರ ಕಳೆದ 10–15 ವರ್ಷಗಳಲ್ಲಿ ಹಾದಿಗೊಂದು ಬೀದಿಗೊಂದು ವಿಶ್ವವಿದ್ಯಾಲಯವನ್ನು ತೆರೆದುಬಿಟ್ಟಿದೆ. ಇದರ ಹಿಂದೆ, ಕಾಸು ಈಸಿಕೊಂಡು ಯಾರನ್ನೋ ಕುಲಪತಿ ಮಾಡುವುದೊಂದೇ ಉದ್ದೇಶವಿದ್ದು, ಅದು ಚೆನ್ನಾಗಿಯೇ ಕಾರ್ಯಗತ ಆಗಿದೆ. ಆದರೆ ಈ ‘ಹೊಸ ವಿಶ್ವವಿದ್ಯಾಲಯ’ಗಳಿಗೆ ಸರ್ಕಾರದಿಂದ ಸೂಕ್ತ ಅನುದಾನ, ಬೋಧಕ ಹುದ್ದೆಗಳ ಸೃಷ್ಟಿ ಆಗಲೇ ಇಲ್ಲ.

ಕುಲಪತಿ ಮತ್ತು ಕುಲಸಚಿವರು ‘ಗೂಟದ ಕಾರು’ಗಳಲ್ಲಿ ನಿದ್ದೆ ಮಾಡಿಕೊಂಡು ತಂತಮ್ಮ ಅವಧಿಯನ್ನು ತೃಪ್ತಿದಾಯಕವಾಗಿ ತುಂಬಿಸುತ್ತಾರೆ. ಹೆಸರಿಗೆ ಒಂದೆರಡು ಕೋರ್ಸ್‌ಗಳನ್ನು ಪ್ರಾರಂಭಿಸಿದ್ದಾರೆ. ಇಲ್ಲಿ ಪಾಠ ಮಾಡುವವರು ಕಾಯಂ ಪ್ರಾಧ್ಯಾಪಕರೇ ಅಥವಾ ವಿಶೇಷ ಅನುಭವ ಇರುವವರೇ ಎಂದರೆ ಅಲ್ಲ. ಅವರೆಲ್ಲ ಈಗಾಗಲೇ ಬೇರೆ ಬೇರೆ ಕಾಲೇಜುಗಳು, ವಿಶ್ವವಿದ್ಯಾಲಯಗಳಿಂದ ನಿವೃತ್ತರಾದವರು.

ಇಂತಹವರಿಗೆ ಇವೆಲ್ಲಾ ಒಂದು ರೀತಿ ‘ಗಂಜಿ ಕೇಂದ್ರ’ಗಳಾಗಿವೆ. ಜೊತೆಗೆ, ಸ್ನಾತಕೋತ್ತರ ಪದವಿ ಹೊಂದಿಲ್ಲದ ಕೆಲವರು ಸಹ ಇಲ್ಲಿ ಬೋಧಿಸುತ್ತಿದ್ದಾರೆ. ಇದು ಉನ್ನತ ಶಿಕ್ಷಣದ ಮೌಲ್ಯ ಹಾಗೂ ಗುಣಮಟ್ಟವನ್ನು ಚರಂಡಿಗೆ ಇಳಿಸುವ ಮಾರ್ಗವಾಗಿದೆ. ಇದಕ್ಕೆಲ್ಲಾ ಉನ್ನತ ಶಿಕ್ಷಣ ಇಲಾಖೆ ಯಾವಾಗ ಕಡಿವಾಣ ಹಾಕುತ್ತದೆ? ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಡುತ್ತಿರುವ ಈ ಚೆಲ್ಲಾಟಕ್ಕೆ ಯಾವಾಗ ಕೊನೆ?
–ರಾಮಕೃಷ್ಣ ಶಾಸ್ತ್ರಿ ಕೆ., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.