ದೆಹಲಿಯಲ್ಲಿ ಆಗಿರುವ ವಾಯುಮಾಲಿನ್ಯದ ತೀವ್ರತೆಯನ್ನು ಕಂಡು ತುಂಬಾ ಬೇಸರವಾಯಿತು. ಸಾಮಾನ್ಯವಾಗಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ನಂತರ ಮಿತಿಮೀರಿ, ಗಂಭೀರ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ. ಈ ವರ್ಷವಂತೂ ಆರೋಗ್ಯ ತುರ್ತು ಪರಿಸ್ಥಿತಿ ಹೇರುವ ಮಟ್ಟವನ್ನು ಅದು ತಲುಪಿರುವುದು ದುರದೃಷ್ಟಕರ.
ವಾಯುಮಾಲಿನ್ಯಕ್ಕೆ ಹಲವಾರು ಕಾರಣಗಳಿವೆಯಾದರೂ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಒಮ್ಮೆಲೇ ಹೀಗೆ ಏರಿಕೆ ಆಗಿರುವುದರ ಹಿಂದೆ, ದೀಪಾವಳಿ ಸಂದರ್ಭದಲ್ಲಿ ಸುಟ್ಟ ಪಟಾಕಿಯ ಕೊಡುಗೆ ಅಪಾರ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬೇಸರದ ಸಂಗತಿಯೆಂದರೆ, ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸೋಣ ಎನ್ನುವ ಹಿತ ಸಂದೇಶಗಳ ನಡುವೆ, ‘ಬೇರೆ ಹಬ್ಬಗಳಿಗಿಲ್ಲದ ಪಟಾಕಿ ನಿಷೇಧದ ಮಾತು ದೀಪಾವಳಿಗಷ್ಟೇ ಏಕೆ? ವರ್ಷಪೂರ್ತಿ ಕಾರ್ಖಾನೆಗಳು, ವಾಹನಗಳು ಸೂಸುವ ವಿಷ ಅನಿಲಕ್ಕಿಂತ ದೀಪಾವಳಿಯ ಪಟಾಕಿಗಳು ವಾಯುಮಾಲಿನ್ಯ ಉಂಟು ಮಾಡುತ್ತವೆಯೇ?’ ಎಂಬಿತ್ಯಾದಿ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದು. ಇವು ಅದೆಷ್ಟೋ ಜನರಿಗೆ ಪಟಾಕಿ ಹೊಡೆಯಲು ಪ್ರೇರಣೆಯಾದವು ಎಂದರೂ ತಪ್ಪಿಲ್ಲ.
ಶಿವಕಾಶಿಯಲ್ಲಿ 1940ರಲ್ಲಿ ಮೊದಲ ಪಟಾಕಿ ಕಾರ್ಖಾನೆ ಸ್ಥಾಪಿತವಾಗುವ ಮುಂಚೆ, ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಸಂಸ್ಕೃತಿ ನಮ್ಮಲ್ಲಿ ಇರಲೇ ಇಲ್ಲ! ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಪಟಾಕಿ ಹೊಡೆಯದೇ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನೆಲ್ಲ ಅರಿಯದೆ, ಜಿದ್ದಿಗೆ ಬಿದ್ದು ದಾರಿ ತಪ್ಪಿಸುವ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ಬಿಡಬೇಕು. ಬೇರೆಯವರಿಗೆ ಇಲ್ಲದ ನಿಷೇಧ ನಮಗ್ಯಾಕೆ ಎನ್ನುವ ನಾವು, ‘ಬದಲಾವಣೆ ತರಬೇಕು ಎಂದರೆ ಮೊದಲು ನಾವು ಬದಲಾಗಬೇಕು’ ಎಂಬ ಮಾತನ್ನು ನೆನಪಿನಲ್ಲಿ ಇಡಬೇಕು.
-ಅರುಣ್ ಬಶೆಟ್ಟಿ, ಗೋಕಾಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.