ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು, ಬೀದಿ ದೀಪಗಳಿಗಾಗಿ ಬಳಸಿದ ವಿದ್ಯುತ್ ಸಂಪರ್ಕಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕೊಡಬೇಕಾದ ಬಾಕಿ ಮೊತ್ತ ₹ 3 ಸಾವಿರ ಕೋಟಿಗಿಂತಲೂ ಅಧಿಕ ಎಂದು ವರದಿಯಾಗಿದೆ(ಪ್ರ.ವಾ., ಜುಲೈ 14).
ಇಂದಿನ ಗ್ರಾಮ ಪಂಚಾಯಿತಿಗಳ ಕಾರ್ಯವಿಧಾನವನ್ನು ಕಂಡವರಿಗೆ ಇದು ಅಚ್ಚರಿ ಅಥವಾ ಗಾಬರಿಪಡುವ ಸಂಗತಿಯೇನಲ್ಲ. ಏಕೆಂದರೆ ಬಹಳಷ್ಟು ಗ್ರಾಮಗಳ ಬೀದಿ ದೀಪಗಳು ಉರಿಯುವುದು ಕತ್ತಲಾಗಿದೆ ಎಂಬ ಕಾರಣದಿಂದಾಗಿ ಖಂಡಿತ ಅಲ್ಲ. ಅದನ್ನು ನಿರ್ವಹಿಸುವವರ ಕಚೇರಿ ಮುಚ್ಚುವ ವೇಳೆಯಾದಾಗ, ಕತ್ತಲು ಆವರಿಸಿರದಿದ್ದರೂ ಐದು ಗಂಟೆಗೇ ಉರಿಯಲಾರಂಭಿಸುತ್ತವೆ. ಎಷ್ಟೋ ಊರುಗಳಲ್ಲಿ ಮರುದಿನ ಕಚೇರಿ ತೆರೆಯುವ ಹೊತ್ತಿಗಷ್ಟೇ ಆರುತ್ತವೆ.
ಇದು ಒಂದೆಡೆಯಾದರೆ, ಇನ್ನು ಎಷ್ಟೋ ಊರುಗಳಲ್ಲಿ ಮುಖ್ಯ ಬಲ್ಬ್ಗಳನ್ನು ಮುಖ್ಯ ಲೈನ್ಗೇ ಜೋಡಿಸಿಬಿಟ್ಟಿರುತ್ತಾರೆ. ಅಲ್ಲಿ ಬಲ್ಬ್ ಉರಿಸುವ, ಆರಿಸುವ ಪ್ರಮೇಯವೇ ಇರದು. ವಿದ್ಯುತ್ ಸಂಪರ್ಕ ನಿಂತಾಗ ಮಾತ್ರವೇ ಬಂದ್ ಆಗಿ ಸೂರ್ಯನಿಗೇ ಸ್ಪರ್ಧೆ ಒಡ್ಡುತ್ತವೆ. ಹಗಲು– ರಾತ್ರಿ ಉರಿದು ಉರಿದು ಹಾಳಾಗುವ ಬಲ್ಬ್ಗಳನ್ನು ಬದಲಾಯಿಸಲು ಮೇಲಿಂದ ಮೇಲೆ ಮಾಡುವ ಇನ್ನೂ ಒಂದು ಖರ್ಚಿನ ಅರಿವೇ ಇಲ್ಲದಿರುವುದು ದೊಡ್ಡ ದುರಂತ. ಈ ಅವಾಂತರಗಳನ್ನು ನಿವಾರಿಸಿಕೊಳ್ಳದೆ ಈಗಿನ ಬಾಕಿ ತುಂಬಿದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದು.
-ಭೀಮಣ್ಣ ಹುಣಸೀಕಟ್ಟಿ,ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.