ADVERTISEMENT

ವಾಚಕರ ವಾಣಿ: ಎಲ್ಲರೂ ಕಾರಣರಾದಾಗ ಕೆಸರೆರಚಾಟವೇಕೆ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 18:28 IST
Last Updated 16 ಮಾರ್ಚ್ 2022, 18:28 IST

ಇದೀಗ ದೇಶದಾದ್ಯಂತ ಸುದ್ದಿ ಮಾಡಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರದ ಪ್ರಮುಖ ವಿಷಯವಾದ ಪಂಡಿತರ ಮಾರಣಹೋಮ ಅಥವಾ ಸಾಮೂಹಿಕ ಪಲಾಯನದ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳು ಕೆಸರೆರಚಾಟ ಮಾಡುತ್ತಿವೆ. ವಾಸ್ತವದಲ್ಲಿ ಇಂತಹ ದುರದೃಷ್ಟಕರ ಬೆಳವಣಿಗೆಯನ್ನು ತಡೆಯುವಲ್ಲಿ ದೇಶದ ಎಲ್ಲ ರಾಜಕೀಯ ಪಕ್ಷಗಳೂ ವಿಫಲವಾದ ಸಂಗತಿಯನ್ನು ಮರೆಯುವಂತಿಲ್ಲ.

ಈ ಘಟನೆ ನಡೆದದ್ದು 1990ರ ಜನವರಿಯಲ್ಲಿ. ಆಗ ದೇಶದ ಪ್ರಧಾನಿ ವಿ.ಪಿ.ಸಿಂಗ್, ಸಮ್ಮಿಶ್ರ ಸರ್ಕಾರದ ಆಡಳಿತ. ಈ ಸರ್ಕಾರಕ್ಕೆ ಬಿಜೆಪಿ ಹಾಗೂ ಎಡಪಕ್ಷಗಳು ಬಾಹ್ಯ ಬೆಂಬಲ ನೀಡಿದ್ದವು. ಜಮ್ಮು ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ರಾಜೀನಾಮೆ ನೀಡಿದ್ದರು. ಜಗನ್ಮೋಹನ್‌ ಅವರು ರಾಜ್ಯಪಾಲರಾಗಿದ್ದರು. ಮುಫ್ತಿ ಮೊಹಮ್ಮದ್ ಅವರು ಗೃಹಮಂತ್ರಿ. ಆದರೆ ಈ ಘಟನೆ ಏಕಾಏಕಿ ನಡೆಯಲು ಸಾಧ್ಯವೇ? ಇಂತಹ ದೊಡ್ಡ ಮಟ್ಟದ ಘಟನೆಗೆ ಪೂರ್ವಸಿದ್ಧತೆ ನಡೆಯುತ್ತಿದ್ದಾಗ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ. ಫಾರೂಕ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ. ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಮಾರಣಹೋಮದ ಹೊಣೆಗಾರಿಕೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ವಹಿಸಬೇಕು. ಬೈಬಲ್‌ನಲ್ಲಿ, ವೇಶ್ಯೆಯೊಬ್ಬಳನ್ನು ಕಲ್ಲುಗಳಿಂದಹೊಡೆಯಲು ಬಂದ ಜನರಿಗೆ ‘ನಿಮ್ಮಲ್ಲಿ ಒಂದೂ ಪಾಪ ಮಾಡದವರು ಕಲ್ಲು ಕೈಗೆತ್ತಿಕೊಳ್ಳಿ’ ಎಂದು ಏಸು ಹೇಳಿದಾಗ, ಅಲ್ಲಿ ಸೇರಿದ್ದ ಎಲ್ಲ ಜನರ ಕೈಗಳಿಂದ ಕಲ್ಲುಗಳು ಕೆಳಗೆ ಬೀಳುತ್ತವೆ.

ಅದೇ ರೀತಿ ಈ ಮಾರಣಹೋಮ ತಡೆಯುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ವಿಫಲವಾದ ಕಾರಣ, ಈ ವಿಚಾರವಾಗಿ ಕೆಸರೆರಚಾಟ ಮಾಡುತ್ತಿರುವುದು ಅರ್ಥಹೀನ. ಅಸಹಾಯಕ ಸ್ಥಿತಿಯಲ್ಲಿ ತಮ್ಮ ಊರು, ಮನೆ ಮಠ ತೊರೆದು ಬಂದ ಕಾಶ್ಮೀರಿ ಪಂಡಿತರ ಪುನರ್ವಸತಿಯ ಬಗ್ಗೆ ಆಗಿರುವ ಬೆಳವಣಿಗೆ, ಅವರ ಸದ್ಯದ ಸ್ಥಿತಿಗತಿಗಳ ಬಗ್ಗೆ ನಾವೆಲ್ಲ ಸರ್ಕಾರವನ್ನು ಪ್ರಶ್ನಿಸಬೇಕಾಗಿರುವುದು ಈಗ ಮಾಡಬೇಕಾದ ಕೆಲಸ.
- ಡಾ. ಟಿ.ಜಯರಾಂ,ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.