‘ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ಪ್ರತಿಕ್ರಿಯೆ ಕೊಡಲು ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲೂ ಜಾಗ ಸಿಗದು’ ಎಂದು ವಿಎಚ್ಪಿ ರಾಜ್ಯ ಮುಖಂಡರು ಆಘಾತಕಾರಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಆತಂಕ ಮೂಡಿಸುತ್ತವೆ.
ದೇಶದಲ್ಲಿ ಸಾಂವಿಧಾನಿಕವಾಗಿ ಸರ್ವರಿಗೂ ಜೀವಿಸುವ ಹಕ್ಕಿದೆ. ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ, ಭಯಪಡಿಸುವುದಕ್ಕೆ ಅಥವಾ ಆತಂಕ ಮೂಡಿಸುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ‘ಭಾರತವು ಸರ್ವ ಜನಾಂಗದ ಶಾಂತಿ’ಯ ತೋಟವಾಗಬೇಕೆಂಬುದು ನಮ್ಮ ಹಿರಿಯರ ಆಶಯವಾಗಿದೆ. ನಾವೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳ ಮೇಲೆ ದೇಶ ಕಟ್ಟಬೇಕಾಗಿದೆ.
ನಿಮ್ಮ ಕತ್ತಿಯಿಂದಾಗಲೀ ಅವರ ಬಂದೂಕು, ಬಾಂಬು ಗಳಿಂದಾಗಲೀ ಯಾವ ಸಾಧನೆಯನ್ನೂ ಮಾಡಲಾರಿರಿ. ಈಗಾಗಲೇ ಜಗತ್ತಿನಲ್ಲಿ ಇಂತಹ ಘೋರವಾದ ಹತ್ಯಾಕಾಂಡಗಳು, ಭಯೋತ್ಪಾದನೆ, ಜನಾಂಗಿಯ ಕಾರಣಕ್ಕಾಗಿ ಪ್ರಾಣ ಹನನಗಳು ನಡೆದುಹೋಗಿವೆ. ಭಯೋತ್ಪಾದನೆ ಅಂದರೆ ಕೇವಲ ಅಸ್ತ್ರ ಶಸ್ತ್ರಗಳು ಮಾತ್ರವಲ್ಲ ಈ ರೀತಿಯಾಗಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದೂ ಆಗಿದೆ.
ಕಿಡಿಯನ್ನು ಉಪೇಕ್ಷಿಸಿದರೆ ಮನೆಯನ್ನೇ ಸುಟ್ಟೀತು ಎಂಬ ಮಾತಿದೆ. ಅದರಂತೆ ಸಣ್ಣ ಪುಟ್ಟ ಮಾತುಗಳು ಬೆಳೆಯುತ್ತಿರುವ ಭಾರತವನ್ನು ಹಿಂದಕ್ಕೆ ಒಯ್ಯುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ನುಡಿ ಭಯೋತ್ಪಾದನೆ ಬೀದಿಗಳಲ್ಲೂ ಕೇಳಿಸುವಂತೆ ಆಗಬಾರದು. ನಮ್ಮ ಯುವಕರು ಸಂವಿಧಾನದ ಮೇಲೆ ನಂಬಿಕೆ ಇರಿಸಬೇಕು. ತಪ್ಪು ಮಾಡಿದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಸರ್ವಧರ್ಮ ಸಮನ್ವಯ, ಸಹಕಾರ, ಸಂಯಮ, ಸಹಬಾಳ್ವೆ ಇಂದು ಮುಂದು ಎಂದೆಂದೂ ಅನಿವಾರ್ಯ.
-ತಿರುಪತಿ ನಾಯಕ್,ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.