ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಮಠಾಧಿಪತಿಗಳು ತಮ್ಮ ತಮ್ಮ ಸಮುದಾಯಕ್ಕೆ ಮಂತ್ರಿ ಪದವಿಗಳನ್ನು ನೀಡುವಂತೆ ಆಗ್ರಹಿಸುತ್ತಿದ್ದಾರೆ. ಕೇಳುವುದು ತಪ್ಪಲ್ಲ, ಆದರೆ ಇವರು ಕಾವಿ ಬಟ್ಟೆ ತೊಟ್ಟು ರಾಜಕಾರಣದ ಮಾತನಾಡುವುದೇಕೆ? ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮಿಯವರಂತೂ ಸರ್ಕಾರವನ್ನೇ ಬೀಳಿಸುವ ಬೆದರಿಕೆಯನ್ನು ಒಡ್ಡಿದ್ದಾರೆ. ಸರ್ವಸಂಗ ಪರಿತ್ಯಾಗಿಗಳಾಗಬೇಕಾಗಿದ್ದ ಇವರು, ದಿನಬೆಳಗಾದರೆ ತಮ್ಮ ಪಂಗಡಗಳ ಹಿತಾಸಕ್ತಿಯನ್ನು ಕಾಯುವುದರಲ್ಲೇ ಮಗ್ನವಾಗುವುದಾದರೆ ಕಾಷಾಯಾಂಬರ ಏಕೆ ಬೇಕು?
ರಾಜಕೀಯದ ಬಗ್ಗೆ ಆಸಕ್ತಿ, ತಮ್ಮ ಸಮುದಾಯದ ಮೇಲೆ ಅಷ್ಟೊಂದು ಆಸ್ಥೆ ಇದ್ದರೆ ಕಾವಿ ಕಳಚಿ ಖಾದಿ
ಧರಿಸಿ, ರಾಜಕೀಯಕ್ಕೆ ಬರಲಿ. ಇಂಥ ಒತ್ತಡ ತಂತ್ರಗಳನ್ನುಬಳಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇದು ವಿವೇಕವಂತರು, ರಾಜಕೀಯ ಪರಿಜ್ಞಾನ ಇರುವವರು ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಅರಿವಿರುವವರು ಮಾತನಾಡುವಂಥದ್ದಲ್ಲ. ಇದನ್ನು ಪರೋಕ್ಷ ‘ಬ್ಲ್ಯಾಕ್ಮೇಲ್’ ಅನ್ನದೇ ವಿಧಿಯಿಲ್ಲ.
ಚೆನ್ನು ಅ. ಹಿರೇಮಠ,ರಾಣೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.