
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್
ನಾಯಕತ್ವ ಗೊಂದಲ: ಜನಹಿತ ಕಡೆಗಣನೆ
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಕುರಿತಾದ ಚರ್ಚೆಗಳು ಮತ್ತು ಹೈಕಮಾಂಡ್ನ ಸರಣಿ ನಿರ್ದೇಶನಗಳು ಆಡಳಿತದ ಮೇಲೆ ಪ್ರಭಾವ ಬೀರುತ್ತಿವೆ. ರಾಜ್ಯ ಹಲವಾರು ದೈನಂದಿನ ಪ್ರಗತಿಯ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಧಿಕಾರದ ಹಂಚಿಕೆ ಕುರಿತಾದ ಅಸ್ಪಷ್ಟತೆಯು ಜನಕಲ್ಯಾಣ ಕಾರ್ಯಕ್ರಮಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಪಕ್ಷದ ಆಂತರಿಕ ಬೆಳವಣಿಗೆಗಳಿಗಿಂತ ಸಮರ್ಥ ಆಡಳಿತವೇ ಸರ್ಕಾರದ ಆದ್ಯತೆಯಾಗಬೇಕು. ಹಾಗಾಗಿ, ಹೈಕಮಾಂಡ್ ಮಧ್ಯಪ್ರವೇಶಿಸಿ ಜವಾಬ್ದಾರಿಗಳನ್ನು ವಿಂಗಡಿಸುವ ಮೂಲಕ ಆಡಳಿತಾತ್ಮಕ ಸ್ಥಿರತೆ ಕಾಪಾಡಬೇಕಿದೆ. ಜನಸಾಮಾನ್ಯರು ಮತ ನೀಡಿದ್ದು ಸ್ಥಿರ ಮತ್ತು ಅಭಿವೃದ್ಧಿಶೀಲ ಸರ್ಕಾರಕ್ಕಾಗಿ ಎಂಬುದು ನೆನಪಿರಲಿ. ಪಕ್ಷದ ಆಂತರಿಕ ವಿಷಯಗಳಿಗಿಂತ ಜನಹಿತಕ್ಕೆ ಮನ್ನಣೆ ದೊರೆತಾಗಷ್ಟೆ ಕರ್ನಾಟಕದ ಪ್ರಗತಿ ಸಾಧ್ಯ.
-ಆನಂದ ಜೇವೂರ್, ಕಲಬುರಗಿ
****
ದೇವದಾಸಿಯರಿಗೆ ಪ್ಯಾಕೇಜ್ ಸ್ತುತ್ಯರ್ಹ
ಮಾಜಿ ದೇವದಾಸಿಯರಿಗೆ ಪ್ಯಾಕೇಜ್ ಘೋಷಣೆಗೆ ನಿರ್ಧರಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಮೂರು ತಲೆಮಾರಿನ ಕುಟುಂಬದ ಸದಸ್ಯರನ್ನು ಸಮೀಕ್ಷೆಯಲ್ಲಿ ಸೇರಿಸಿದ ನಡೆಯೂ ಸ್ತುತ್ಯರ್ಹ. ದೇವರ ಹೆಸರಿನಲ್ಲಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವುದು ನಡೆದೇ ಇದೆ. ಇಂತಹ ಕುಕೃತ್ಯ ತಡೆಗಟ್ಟಲು ಮಾಜಿ
ದೇವದಾಸಿಯರ ಸಂಘಟನೆಗಳು ಟೊಂಕಕಟ್ಟಿ ನಿಲ್ಲಬೇಕಿದೆ. ದೇವದಾಸಿಯರ ಕುರಿತು ಸರ್ಕಾರ ಎರಡು ಬಾರಿ ಸಮೀಕ್ಷೆ ನಡೆಸಿದಾಗ ತಾಯಿಯ ಹೆಸರು ಸೇರ್ಪಡೆಯಾದರೆ ಮಗಳ ಹೆಸರು ಸೇರಿರಲಿಲ್ಲ. ಮಗಳ ಹೆಸರು ಸೇರಿಸಿದರೆ ತಾಯಿಯ ಹೆಸರು ಸೇರಿರಲಿಲ್ಲ. ಕೆಲವರಂತೂ ಗೋವಾ, ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ರಿಂದ ಸಮೀಕ್ಷೆಯಿಂದ ಹೊರಗುಳಿಯಲು ಕಾರಣವಾಗಿತ್ತು. ಸರ್ಕಾರವು ದೇವದಾಸಿ ಕುಟುಂಬದ ಸದಸ್ಯರನ್ನು ಮುನ್ನೆಲೆಗೆ ತಂದು ಅಭ್ಯುದಯಕ್ಕೆ ನೆರವಾಗಬೇಕಿದೆ.
-ಚಂದ್ರಶೇಖರ ಎಸ್. ಚಿನಕೇಕರ, ಚಿಕ್ಕೋಡಿ
****
ದುಂದುವೆಚ್ಚ: ಆರ್ಥಿಕ ವ್ಯವಸ್ಥೆಗೆ ಮಾರಕ
ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಿಗೆ ಬೇಕಾಬಿಟ್ಟಿಯಾಗಿ ಸಚಿವ ಸ್ಥಾನಮಾನ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಕುರಿತ ಸಂಪಾದಕೀಯ (ಪ್ರ.ವಾ., ಫೆ. 12) ಸಮಯೋಚಿತವಾಗಿದೆ. ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಬಳಸುವಾಗ ಸರ್ಕಾರಕ್ಕೆ ವಿವೇಚನೆ ಮತ್ತು ವಿವೇಕ ಇರಬೇಕು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕಾದ ಹಣವನ್ನು ದುಂದುವೆಚ್ಚ ಮಾಡುವುದು ರಾಜ್ಯದ ಅರ್ಥ ವ್ಯವಸ್ಥೆಗೆ ಮಾರಕವಾಗಲಿದೆ. ಸರ್ಕಾರದ ನಡೆ ಅವೈಜ್ಞಾನಿಕವಾದುದು. ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸುವು ದರಲ್ಲೇ ಸರ್ಕಾರ ಹೈರಾಣಾಗಿದೆ. ಇದರಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿರು ವುದು ಸ್ಪಷ್ಟ. ತೆರಿಗೆ ಹಣದ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ.
-ಎ.ವಿ. ಶಾಮರಾವ್, ಬೆಂಗಳೂರು
****
ರಾಜಕೀಯ ಲಾಭಕ್ಕೆ ಅಸ್ಪೃಶ್ಯತೆ ಜೀವಂತ
ಅಸ್ಪೃಶ್ಯತೆಯು ಒಂದು ಸಾಮಾಜಿಕ ಕಳಂಕ. ಸಮಾಜ ಎಷ್ಟೇ ಮುಂದುವರಿದಿದ್ದರೂ ಈ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಶರಣರು ತಮ್ಮ ವಚನಗಳ ಮೂಲಕ ಅಸ್ಪೃಶ್ಯತೆಯ ಮೂಲೋತ್ಪಾಟನೆಗೆ ಶ್ರಮಿಸಿದರು. ಆದರೆ, ಇಂದಿನ ರಾಜಕೀಯ ಧುರೀಣರು ತಮ್ಮ ಅಸ್ತಿತ್ವದ ಉಳಿವು ಮತ್ತು ರಾಜಕೀಯ ಲಾಭಕ್ಕಾಗಿ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟಿದ್ದಾರೆ. ಶಿವಶರಣರ ಧರ್ಮದ ಬದಲು ವರ್ಣಾಶ್ರಮ ಧರ್ಮ ಉಳಿಸಿ ಬೆಳೆಸಲು ಶತಪ್ರಯತ್ನ ಮಾಡುತ್ತಿರುವುದು ಕುಚೋದ್ಯ. ಸಮಾಜದಲ್ಲಿ ಅಸ್ಪೃಶ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ.
-ಪುಟ್ಟಮಾದಯ್ಯ ಎಚ್.ಎಂ., ಮೈಸೂರು
****
ಆಹಾರದ ಅಪಹಾಸ್ಯ: ವಿಕೃತಿಯ ಪ್ರತೀಕ
ಬೀದಿಬದಿಯ ಹೋಟೆಲ್ ವ್ಯಾಪಾರಿಯೊಬ್ಬ ಪೂರಿಯನ್ನು ತನ್ನ ಹೊಟ್ಟೆಯ ಮೇಲೆ ಹಾಕಿಕೊಂಡು ಅದನ್ನು ಎಣ್ಣೆಯಲ್ಲಿ ಕರಿದ ನಂತರ ಗ್ರಾಹಕರಿಗೆ ನೀಡುತ್ತಾನೆ; ಏನೂ ಅರಿಯದ ಅವರು ತಿನ್ನುತ್ತಾರೆ– ಆಹಾರವನ್ನೇ ಅಪಹಾಸ್ಯ ಮಾಡುವ ಇಂತಹ ಸಾವಿರಾರು ಎ.ಐ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನುಷ್ಯ ಆಹಾರವಿಲ್ಲದೆ ಬದುಕಲಾರ. ಆದರೆ, ಆಹಾರದ ಬಗ್ಗೆ ಅಪಹಾಸ್ಯ ಮಾಡುವುದು ವಿಕೃತ ಮನಃಸ್ಥಿತಿಯಲ್ಲದೆ ಬೇರೇನೂ ಅಲ್ಲ. ಇಂತಹ ಎ.ಐ ವಿಡಿಯೊಗಳಿಂದ ಮುಂದಿನ ಪೀಳಿಗೆಗೆ ನೀಡುವ ಸಂದೇಶವಾದರೂ ಏನು ಎಂಬುದು ಸೃಷ್ಟಿಕರ್ತರಿಗೆ ಅರ್ಥವಾಗದಿರುವುದು ದುರದೃಷ್ಟಕರ. ಸಮಾಜದ ಸ್ವಾಸ್ಥ್ಯ ಹದಗೆಡಿಸುವಂತಹ ವಿಡಿಯೊಗಳನ್ನು ಸೃಷ್ಟಿಸುವವರಿಗೆ ಕಾನೂನಿನ ಮೂಗುದಾರ ಹಾಕಬೇಕಿದೆ.
-ಮುರುಗೇಶ ಡಿ., ದಾವಣಗೆರೆ
****
ಪರೀಕ್ಷೆ ಒತ್ತಡ ಬೇಡ; ಒತ್ತಾಸೆ ಇರಲಿ
ಎಲ್ಲೆಡೆ ಈಗ ಪರೀಕ್ಷಾ ಸಮಯ. ಪೋಷಕರಿಗೂ ಇದು ನಿಜವಾದ ಪರೀಕ್ಷೆ. ಹಾಗಾಗಿ, ಮಕ್ಕಳ ಮೇಲೆ ಒತ್ತಡ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಸ್ನೇಹಿತರ ಮಕ್ಕಳು ವೈದ್ಯರು, ಎಂಜಿನಿಯರ್ ಆಗಿದ್ದಾರೆ; ನೀನು ಹಾಗೆ ಓದಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ಮಕ್ಕಳ ಮೇಲೆ ಅನಗತ್ಯವಾಗಿ ಒತ್ತಡ ಹೇರುವ ಅಗತ್ಯವಿಲ್ಲ. ಅವರ ಬುದ್ಧಿಗೆ ಅನುಸಾರ ಜೀವನ ರೂಪಿಸಿಕೊಳ್ಳುವ ಬಗ್ಗೆ ಅವರಿಗೆ ತಿಳಿದಿರುತ್ತದೆ. ಅವರಿಗೆ ಮಾನಸಿಕ ಧೈರ್ಯ ತುಂಬುವುದಷ್ಟೆ ಪೋಷಕರ ಕೆಲಸವಾಗಬೇಕಿದೆ. ಅಂಕಗಳಿಂದ ಮಕ್ಕಳ ಬುದ್ಧಿಮತ್ತೆಯನ್ನು ಅಳೆಯಬಾರದು. ಬೇರೆ ಮಕ್ಕಳ ಜೊತೆಗೆ ಹೋಲಿಕೆಯೂ ಸರಿಯಲ್ಲ. ಇದು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ. ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವಲ್ಲಿ ಪೋಷಕರ ಸಹಕಾರ ಅಗತ್ಯ.
-ಎ.ಸಿ. ಪುಷ್ಪ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.