ವೆಂಕಟೇಶ ಮಾಚಕನೂರ ಅವರ ಪತ್ರದಲ್ಲಿ (ವಾ.ವಾ., ಮಾರ್ಚ್ 15) ಬರುವ ರಿಕ್ಷಾ ಚಾಲಕ ಪಿಂಚಣಿ ಬಗ್ಗೆ ಹೇಳಿರುವುದರಲ್ಲಿ ತಪ್ಪಿಲ್ಲ. ಯಾವ ವ್ಯಕ್ತಿಗೆ ತಾನೇ ಸರ್ಕಾರಿ ಕೆಲಸ, ಜೀವನದ ಭದ್ರತೆ ಬೇಡ? ಆದರೆ ಸರಿಯಾದ ಓದು, ಓದಿಗೆ ಸರಿಯಾದ ಕೆಲಸ ನಮ್ಮ ದೇಶದಲ್ಲಿ ಇದೆಯೇ? ನಿರುದ್ಯೋಗ ತಾಂಡವವಾಡುತ್ತಿದೆ. ಕೆಲವರು ಲಕ್ಷಗಟ್ಟಲೆ ಸಂಬಳ ಪಡೆಯುತ್ತಾರೆ. ಇನ್ನು ಕೆಲವರು ₹ 10 ಸಾವಿರ, 20 ಸಾವಿರ ಮಾತ್ರ ತೆಗೆದುಕೊಂಡು ಅವರಿಗೆ ಸರಿಸಮನಾಗಿ ಕೆಲಸ ಮಾಡುವಂತಹ ಸ್ಥಿತಿ ಇದೆ. ವೆಂಕಟೇಶ ಅವರೇ ಹೇಳಿರುವಂತೆ, ಬೆವರಿಲ್ಲದ ದುಡಿಮೆ ಮುನ್ನೆಲೆಯಲ್ಲಿದೆ. ಜನಸಾಮಾನ್ಯರನ್ನು ಒಳಗೊಳ್ಳದ ಆರ್ಥಿಕತೆ ಚಾಲ್ತಿಯಲ್ಲಿದೆ. ಇದು ಅಪಾಯಕಾರಿ ಎಂದು ನಮ್ಮ ಹಿರಿಯರು ಎಚ್ಚರಿಸಿಲ್ಲವೇ?
ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆ, ಅವರವರ ಯೋಗ್ಯತೆಗೆ ಅನುಗುಣವಾದ ಕೆಲಸ ದೊರಕಬೇಕು. ಜನರಿಗೆ ಯೋಗ್ಯವಾದ ಶಿಕ್ಷಣ, ಆರೋಗ್ಯ, ಉದ್ಯೋಗ ಒದಗಿಸಲೇ ಅಲ್ಲವೆ ಸರ್ಕಾರಗಳಿರುವುದು. ಸರ್ಕಾರ ಸಂಪತ್ತನ್ನು ಸಮನಾಗಿ ಹಂಚಿಕೆ ಮಾಡಿದರೆ ದಾಸೋಹ ಮಾಡುವ ಸಂದರ್ಭ ಬರಲಾರದೇನೋ!
-ಸರೋಜ ಎಂ.ಎಸ್., ಸಾಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.