ನಾಯಿಗಳ ಬಗ್ಗೆ ಮಾಲೀಕರಿಗೆ ಭಾವನಾತ್ಮಕ ಮನೋಭಾವ ಸಹಜ ಮತ್ತು ಅದು ಮಾನವೀಯ ಗುಣ ಕೂಡ ಹೌದು. ಆದರೆ, ಆ ಮೂಕಪ್ರಾಣಿಗಳನ್ನು ಸಾಕುವವರು ತಮ್ಮ ಸುತ್ತಲಿನ ಪರಿಸರ, ಜನರ ಸುರಕ್ಷತೆ ಬಗ್ಗೆ ಕಾಳಜಿ ವಹಿಸದೇ ಇರುವುದನ್ನೇ ಹೆಚ್ಚಾಗಿ ನೋಡುತ್ತೇವೆ. ಈ ವಿಚಾರದಲ್ಲಿ ನ್ಯಾಯಾಲಯವು ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಗೆ (ಬಿಬಿಎಂಪಿ) ಮೌಖಿಕ ಎಚ್ಚರಿಕೆ ನೀಡಿ, ಮಾಲೀಕರು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆ ತಂದು ಮಲ, ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಲು ಕ್ರಮ ಜರುಗಿಸಬೇಕು ಎಂದಿರುವುದು ಸೂಕ್ತವಾಗಿದೆ (ಪ್ರ.ವಾ., ಡಿ. 10).
ಬಿಬಿಎಂಪಿಯು ಸಮಸ್ಯೆಗಳಿಗೆ ದಂಡ ಸಂಗ್ರಹವೇ ಏಕೈಕ ಪರಿಹಾರ ಎಂದುಕೊಳ್ಳದೆ, ಮಾಲೀಕರು ಕಡ್ಡಾಯವಾಗಿ ನಾಯಿಯ ಮಲವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವಿಧಾನದ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಅದನ್ನು ‘ಪ್ರತ್ಯೇಕವಾಗಿ’ ಸಂಗ್ರಹಿಸುವ ಸೌಕರ್ಯ ಒದಗಿಸಬೇಕು. ಅದು ಇತರ ತ್ಯಾಜ್ಯದೊಂದಿಗೆ ಮಿಶ್ರಣವಾಗದ ರೀತಿಯಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು. ಆಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಭಾವನೆ ಜೊತೆಗೆ ಜಾಗರೂಕತೆ ಇದ್ದರೆ ಪ್ರಾಣಿಗಳ ಸಖ್ಯ ಎಷ್ಟೊಂದು ಚೆಂದ ಅಲ್ಲವೇ?
- ಡಾ. ಜಿ.ಬೈರೇಗೌಡ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.