ADVERTISEMENT

‘ಆತ್ಮನಿರ್ಭರ್’ಗೆ ಮಾರ್ಗ ಸುಗಮಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 20:15 IST
Last Updated 2 ಜೂನ್ 2020, 20:15 IST

ಕೊರೊನಾ ಪ್ರಕರಣಗಳ ಸಂಖ್ಯೆ ಆಕಾಶದತ್ತ ಏರುತ್ತಿರುವಾಗ, ನಾಯಕರ ಮುನ್ನೋಟವಿಲ್ಲದ ಗೊಂದಲಮಯ ನಿರ್ಧಾರಗಳು ಜನರನ್ನು ಆತಂಕಕ್ಕೆ ದೂಡುತ್ತಿವೆ. ಒಮ್ಮೆ ಹದಿನಾಲ್ಕು ದಿನ ಕ್ವಾರಂಟೈನ್ ಆದರೂ ಸಾಲದೆನ್ನುವುದು, ಮರುದಿನದಿಂದ ಒಂದು ವಾರ ಸಾಕೆನ್ನುವುದು; ಇವತ್ತು ಎಲ್ಲ ಮುಚ್ಚಿವೆ ಎಂದರೆ, ನಾಳೆ ಎಲ್ಲವೂ ತೆರೆಯಲಿವೆ ಎನ್ನುವುದು; ಇಲ್ಲಿ ಕೂರುವವರು ದೂರದೂರ
ಕೂರಬೇಕು ಎನ್ನುವುದು, ಅಲ್ಲಿ ಹಾರುವವರು ಪಕ್ಕಪಕ್ಕವೇ ಹಾರಬಹುದು ಎನ್ನುವುದು; ಒಮ್ಮೆ ಕೊರೊನಾ ಚಿಕಿತ್ಸೆ ಸಂಪೂರ್ಣ ಸರ್ಕಾರದ ಹೊಣೆ ಎನ್ನುವುದು, ಮತ್ತೊಮ್ಮೆ ಜನ ತಮ್ಮ ಟೆಸ್ಟ್ ತಾವೇ ಮಾಡಿಕೊಳ್ಳಬೇಕೆನ್ನುವುದು...

ಈ ಗೊಂದಲಕ್ಕೆ ಕಾರಣ ಸ್ಪಷ್ಟ: ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರ, ಆರೋಗ್ಯ ವಿಜ್ಞಾನಿಗಳ ಸಮೂಹವೇ ಭಾರತ ದಲ್ಲಿದ್ದರೂ ಅಧಿಕಾರಗಣದ ಆಡಳಿತ ಚಾಕಚಕ್ಯತೆಯು ಯುದ್ಧ ಭಾಷೆಯಲ್ಲಿ ಪರಿಸ್ಥಿತಿ ನಿಭಾಯಿಸುತ್ತಿದೆಯೇ ಹೊರತು ತಜ್ಞರ ಅನುಭವದ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಯಾವ ಪತ್ರಿಕಾಗೋಷ್ಠಿಯನ್ನೇ ನೋಡಿ, ಅಲ್ಲಿ ಆರೋಗ್ಯತಜ್ಞರ ಉಪಸ್ಥಿತಿಯೂ ಇಲ್ಲವಾಗಿದೆ. ಕೋವಿಡ್-19 ಆರೋಗ್ಯ ಸಮಸ್ಯೆಯೇ ಹೊರತು ಯುದ್ಧವಲ್ಲ. ಲಾಕ್, ಅನ್‍ಲಾಕ್ ಮಾಡಲು ದೇಶವೆಂದರೆ ಖಜಾನೆಯಲ್ಲ. ಯುದ್ಧನ್ಯಾಯದಲ್ಲಿ ಹಲವು ಮುಖ್ಯ ವಿಷಯಗಳು ಹಿನ್ನೆಲೆಗೆ ಸರಿದು ಅಮೂರ್ತ ವಿಷಯಗಳೇ ಪ್ರಾಮುಖ್ಯ ಪಡೆದುಬಿಡುತ್ತವೆ. ಆದರೆ ಕೊರೊನಾ ಇರಲಿ, ಮಿಡತೆಗಳೇ ಇರಲಿ, ಅವುಗಳಿಂದ ನಮ್ಮನ್ನು ಕಾಪಾಡಿ ಕೊಳ್ಳಲು ಮಾನವೀಯ ನಂಟು ಬಲಗೊಂಡರಷ್ಟೇ ಸಾಧ್ಯವಾಗುತ್ತದೆ. ಆಗ ಮಾತ್ರ ಭಾರತ ‘ಆತ್ಮನಿರ್ದಯ್’ ಆಗದೆ ‘ಆತ್ಮನಿರ್ಭರ್’ ಆಗಲು ಮಾರ್ಗ ಸುಗಮಗೊಳ್ಳುತ್ತದೆ.

-ಡಾ. ಎಚ್.ಎಸ್.ಅನುಪಮಾ, ಕವಲಕ್ಕಿ, ಹೊನ್ನಾವರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.