ADVERTISEMENT

ಅಷ್ಟಾಂಗಮಾರ್ಗ ದಾರಿದೀಪವಾಗಲಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST

‘ರಾವಣ ಎಂಬ ಮಹಾನ್ ರೂಪಕ’ ಎಂಬ ಸಬಿತಾ ಬನ್ನಾಡಿಯವರ ಲೇಖನ (ಪ್ರ.ವಾ., ಮಾರ್ಚ್‌ 5) ಪ್ರಸ್ತುತ ಪ್ರಪಂಚವು ನಾಗಾಲೋಟದಲ್ಲಿ ಧಾವಿಸುತ್ತಿರುವ, ಇದೇ ಜೀವನವೆಂಬ ಹುಸಿ ಭ್ರಮೆಗಳಿಗೆ ಒಳಗಾಗಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಸುಸ್ಥಿರ ಅಭಿವೃದ್ಧಿ, ಸರ್ವಜೀವಜಾಲದ ಸುಖ ಸಮೃದ್ಧಿ ಬಯಸಿದ ಬುದ್ಧ, ಬಸವ, ಗಾಂಧಿ, ವಿವೇಕಾನಂದ, ಈಗಿನ ಮೇಧಾ ಪಾಟ್ಕರ್, ಸುಂದರಲಾಲ್ ಬಹುಗುಣ, ಗ್ರೇಟಾ ಥನ್‍ಬರ್ಗ್, ವಂದನಾ ಶಿವ ಅವರಂತಹವರ ಬುದ್ಧಿಮಾತಿನ ಕೊಳಲಗಾನ, ಹಿತಧ್ವನಿ ಹೃದಯಗಳಿಗೆ ನಾಟುತ್ತಿಲ್ಲ. ಹೋಲಿಕೆ ಮತ್ತು ಸ್ಪರ್ಧೆಗಳ ಮೇಲಾಟದಲ್ಲಿ ಪರಿಸರನಾಶ, ಮೌಲ್ಯಗಳ ವಿನಾಶ, ಭೂಮಿ, ಹೆಣ್ಣಿನ ಮೇಲಿನ ಶೋಷಣೆ, ಅತ್ಯಾಚಾರ, ಅಧಿಕಾರದಾಹದಿಂದ ಜೀವಜಾಲವೇ ನಲುಗುತ್ತಿದೆ.

ಬುದ್ಧನ ಅಷ್ಟಾಂಗಮಾರ್ಗಗಳಾದ ಸರಿಯಾದ ದೃಷ್ಟಿ, ಸಂಕಲ್ಪ, ಮಾತು, ಕಾರ್ಯ, ಉದ್ಯೋಗ, ಪ್ರಯತ್ನ, ಗಮನ, ಏಕಾಗ್ರತೆ ನಮಗೆಲ್ಲ ದಾರಿದೀಪವಾಗಬೇಕಿದೆ. ಬುದ್ಧ ತಿಳಿಸಿದ ಜೀವಪರ, ಜನಪರ, ಪರಿಸರಪರ ಉದ್ಯೋಗಗಳನ್ನಷ್ಟೇ ನಾವು ಕೈಗೊಂಡರೆ ಭೂಮಿ, ಜೀವಜಾಲ ಉಳಿದೀತು.

–ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.