ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿ ಬಹುತೇಕ ಒಂದು ತಿಂಗಳು ಸಮೀಪಿಸುತ್ತಿದ್ದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷದ ಪದವಿ ಕೋರ್ಸುಗಳಿಗೆ ಪ್ರವೇಶಾತಿ ಆರಂಭವಾದಂತಿಲ್ಲ.
ಈ ಕುರಿತು ವಿದ್ಯಾರ್ಥಿಗಳು ಕಾಲೇಜುಗಳನ್ನು ಸಂಪರ್ಕಿಸಿದಾಗ, ಇಲಾಖೆಯಿಂದ ಇನ್ನೂ ಆದೇಶ ಬಂದಿಲ್ಲ ಎನ್ನುತ್ತಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬ ಭಯದಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ, ಕೋವಿಡ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿಯೂ ದುಬಾರಿ ಶುಲ್ಕ ತೆತ್ತು ಖಾಸಗಿ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ.
ಖಾಸಗಿ ಕಾಲೇಜುಗಳು ಪಿಯು ಫಲಿತಾಂಶ ಪ್ರಕಟಣೆಗಿಂತಲೂ ಮೊದಲೇ ಬಹಳಷ್ಟು ಪೂರ್ವ ತಯಾರಿಯೊಂದಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಎಲ್ಲ ಪ್ರಯತ್ನಗಳನ್ನೂ ನಡೆಸಿವೆ. ಈ ರೀತಿಯ ವೃತ್ತಿಪರತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಏಕಿಲ್ಲ? ಕಳೆದ ಬಾರಿ ಕೂಡ ಮೊದಲನೇ ವರ್ಷದ ಪ್ರವೇಶಾತಿಗೆ ಆನ್ಲೈನ್ ಅರ್ಜಿ ತುಂಬುವುದು, ಮೆರಿಟ್ ಪಟ್ಟಿಯಲ್ಲಿದ್ದವರನ್ನು ಮಾತ್ರವೇ ದಾಖಲು ಮಾಡಿಸಿಕೊಳ್ಳುವಂತಹ ಪ್ರಹಸನಗಳಿಂದ ವಿದ್ಯಾರ್ಥಿಗಳು ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿ ಖಾಸಗಿ ಕಾಲೇಜುಗಳತ್ತ ಮುಖ ಮಾಡುವಂತೆ ಆಗಿತ್ತು. ಈ ಬಾರಿಯೂ ಪ್ರವೇಶ ಪ್ರಕ್ರಿಯೆ ಆರಂಭಿಸದಿರುವುದು ಇಲಾಖೆಯು ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವೇ? ಈ ಬಾರಿಯಾದರೂ ಆನ್ಲೈನ್ನಲ್ಲಿ ಅರ್ಜಿ ಹಾಕುವ ಪ್ರಕ್ರಿಯೆ ಸರಳಗೊಳಿಸಿ ಬಡ ಮತ್ತು ಆಕಾಂಕ್ಷಿ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜುಗಳು ಹಾಗೂ ಇಲಾಖೆ ಬರಮಾಡಿಕೊಳ್ಳುತ್ತವೆಯೇ?
ಪಿ.ಬಿ.ನಾಯಕ್,ಕಾರವಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.