ಯಾದಗಿರಿ: ‘ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ 900 ವರ್ಷಗಳ ಹಿಂದೆ ಬದುಕಿದ್ದ ಸಾಹಿತಿ ಪಂಪನ ರಕ್ತಸಂಬಂಧಿಗಳು ಸಿಕ್ಕಿದ್ದಾರಂತೆ! ನಾನೂ ಒಂದಿಷ್ಟು ಸಂಶೋಧನೆ ಮಾಡಿದ್ದೇನೆ, ಇತಿಹಾಸಕಾರರನ್ನು ಕಂಡಿದ್ದೇನೆ. ಆದ್ರೆ, ಇಂಥಾ ಅದ್ಭುತ ಸಂಶೋಧನೆ ಕೇಳಲೂ ಇಲ್ಲ, ನೋಡಲೂ ಇಲ್ಲ’ ಎಂದು ಪಾಟೀಲ ಪುಟ್ಟಪ್ಪ ಅವರು ಸಂಶೋಧಕ ಎಂ. ಚಿದಾನಂದಮೂರ್ತಿ ಅವರ ಸಂಶೋಧನೆ ಬಗ್ಗೆ ವ್ಯಂಗ್ಯ ಧಾಟಿಯಲ್ಲಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಪಾಪು, ತಮ್ಮ ಮತ್ತು ಚಿದಾನಂದಮೂರ್ತಿ ಅವರ ಮಧ್ಯೆ ಈ ಬಗ್ಗೆ ನಡೆದ ಒಂದು ಸಂಭಾಷಣೆಯ ಸಂದರ್ಭವನ್ನೂ ಬಿಚ್ಚಿಟ್ಟರು. ‘ಚಿದಾನಂದಮೂರ್ತಿ ಅವ್ರು ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ, ಅಲ್ರಿ ಚಿದಾನಂದಮೂರ್ತಿ, ಇಷ್ಟ್ ವರ್ಷ ನಾನೂ ಅಣ್ಣಿಗೇರಿ ಆಜುಬಾಜು ಸುತ್ತಾಡೀನಿ. ಆದ್ರೂ ಪಂಪನ ಬಂಧುಗಳು ಒಬ್ರೂ ಕಾಣ್ಲಿಲ್ಲ. ಬೆಂಗಳೂರಲ್ಲಿ ಕೂಡೊ ಮಂದಿ ನಿಮಗ್ ಹ್ಯಾಂಗ್ ಕಂಡ್ರು? ಆಯ್ತು ಬಿಡ್ರಿ, ಅಂದ್ಹಾಂಗ... ನಿಮ್ಮ ಮುತ್ತಾತನ ಹೆಸರೇನು? ಎಂದು ಪ್ರಶ್ನಿಸಿದ್ದೆ. ಕಕ್ಕಾಬಿಕ್ಕಿಯಾದ ಚಿದಾನಂದಮೂರ್ತಿ ನನ್ನನ್ನು ದುರುಗುಟ್ಟಿ ನೋಡಿದ್ದರು’ ಎಂದು ಪಾಪು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.