
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ
ಪುರಾತನ ಕಾಲದಿಂದಲೂ ಭಾರತದಲ್ಲಿ ಮಕ್ಕಳಾಗದವರು ದೇವರ ಮೊರೆಹೋಗುವ ನಂಬಿಕೆ ಇದೆ. ದೇವರ ಅನುಗ್ರಹ ಪಡೆಯುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದ ನಂಬಿಕೆ ಭಾರತೀಯರಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲೂ ಪ್ರಚಲಿತದಲ್ಲಿವೆ. ಭಾರತದಲ್ಲಿ ಇರುವಂತೆ ಇತರೆ ದೇಶಗಳಲ್ಲಿಯೂ ಕೆಲವು ಸಾಂಪ್ರದಾಯಗಳಿವೆ. ಭೂತಾನ್ನಲ್ಲಿ ಫಲವತ್ತತೆಗೆ ಸಂಬಂಧಿಸಿದ ದೇವಾಲಯವಿದೆ. ಈ ದೇವಾಲಯದ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ.
ನೆರೆಯ ದೇಶವಾಗಿರುವ ಭೂತಾನ್ನ ಪುನಾಖಾ ಜಿಲ್ಲೆಯಲ್ಲಿ ಚಿಮಿ ಲಖಾಂಗ್ ಎಂಬ ಬೌದ್ಧ ದೇವಾಲಯವಿದೆ. ಈ ದೇವಾಲಯವನ್ನು ಫಲವತ್ತತೆಯ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯಕ್ಕೆ ಮಕ್ಕಳು ಆಗದ ದಂಪತಿಗಳು ಭೇಟಿ ನೀಡಿ, ಅಲ್ಲಿರುವ ಶಿಶ್ನದ ಆಕಾರದ ಮರದ ಚಿಹ್ನೆಯನ್ನು ಹೊತ್ತು ಪ್ರದಕ್ಷಿಣೆ ಹಾಕುತ್ತಾರೆ. ಆ ಮೂಲಕ ಮಕ್ಕಳಾಗುತ್ತದೆ ಎಂಬ ನಂಬಿಕೆ ಅವರದ್ದು.
ಈ ದೇವಾಲಯವನ್ನು 1499ರಲ್ಲಿ ದೈವಿಕ ಹುಚ್ಚ ಎಂದು ಕರೆಯಲ್ಪಡುವ ಬೌದ್ಧ ಗುರು ಡ್ರುಕ್ಪಾ ಕುನ್ಲೆ ಅವರ ಸ್ಮರಣಾರ್ಥಕ್ಕಾಗಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಆ ಸನ್ಯಾಸಿಯನ್ನು ಅಲ್ಲಿನ ಸ್ಥಳೀಯರು ದೃಷ್ಟ ಶಕ್ತಿ ನಿರ್ಮೂಲಕ ಮತ್ತು ಸಂತಾನ ಭಾಗ್ಯ ಕರುಣಿಸುವ ಸನ್ಯಾಸಿ ಎಂದು ನಂಬಿದ್ದರು.
ಇಂದಿಗೂ ಈ ದೇವಾಲಯಕ್ಕೆ ಬಂದು ಅಲ್ಲಿ ವ್ರತವನ್ನು ಆಚರಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಇತರೆ ದೇವಾಲಯಗಳು
ಗರ್ಭರಕ್ಷಾಂಬಿಕ ದೇವಸ್ಥಾನ
ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಗರ್ಭರಕ್ಷಾಂಬಿಕ ಎಂಬ ದೇವಸ್ಥಾನವಿದೆ. ಈ ದೇವಾಲಯಕ್ಕೆ ದಂಪತಿಗಳು ಭೇಟಿ ನೀಡಿದರೆ, ಗರ್ಭರಕ್ಷಾಂಬಿಕೆಯ ಪಾದಕ್ಕೆ ತುಪ್ಪ ಹಚ್ಚಿ ಪೂಜೆ ಸಲ್ಲಿಸಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಮನ್ನಾರಸಾಲ ಶ್ರೀ ನಾಗರಾಜ ದೇವಸ್ಥಾನ
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಮನ್ನಾರಸಾಲ ಶ್ರೀ ನಾಗರಾಜ ದೇವಸ್ಥಾನವಿದೆ. ಈ ದೇವಾಲಯ ಪ್ರಾಚೀನ ಸರ್ಪದೇಗುಲ ಪೈಕಿ ಒಂದೆನಿಸಿದೆ. ಈ ದೇಗುಲಕ್ಕೆ ಭೇಟಿ ನೀಡಿ ಪಾದಯಾತ್ರೆ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಸಂತಾನ ವೇಣುಗೋಪಾಲ ಸ್ವಾಮಿ
ಕರ್ನಾಟಕದ ನಂಜನಗೂಡಿನಲ್ಲಿರುವ ಈ ದೇವಾಲಯವನ್ನು ದಕ್ಷಿಣ ಗೋವರ್ಧನ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದರೆ, ಸಂತಾನ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಅಖಿಲಾಂಡೇಶ್ವರಿ ಅಮ್ಮನ ದೇವಾಲಯ
ತಮಿಳುನಾಡಿನ ಈ ದೇವಾಲಯಕ್ಕೆ ಭೇಟಿ ನೀಡಿ ಅರಿಶಿಣವನ್ನು ದೇವರಿಗೆ ಅರ್ಪಿಸಿ, ಬಳಿಕ ಆ ಅರಿಶಿಣ ಹಚ್ಚಿ ಸ್ನಾನ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸಂತಾನೇಶ್ವರ ಮಹಾದೇವ
ಮಧ್ಯಪ್ರದೇಶದಲ್ಲಿರುವ ಈ ದೇವಾಲಯ ಸಂತಾನ ಪೂಜೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸಂತಾನ ಪೂಜೆ ಮಾಡಿಸಿದರೆ, ಸಂತಾನ ಪ್ರಾಪ್ತವಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ
ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಪೈಕಿ ಕುಕ್ಕೆ ಒಂದು. ನಾಗ ದೋಷದಿಂದ ಸಂತಾಕ್ಕೆ ಅಡ್ಡಿಯಾಗಿದ್ದರೆ ಇಲ್ಲಿ ಪರಿಹಾರವಾಗಲಿದೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.