ADVERTISEMENT

ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST
ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕ ತಂಡ
ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕ ತಂಡ   

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎನ್) ಕರ್ನಾಟಕ ವೃತ್ತದ ಆಶ್ರಯದಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು.

ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 6-0 ಗೋಲುಗಳಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಲಭ ಗೆಲುವು ಪಡೆಯಿತು. ಮುದಸ್ಸಿರ್ ಅಹ್ಮದ್ (5 ಮತ್ತು 15ನೇ ನಿಮಿಷ) ಆತಿಥೇಯ ತಂಡಕ್ಕೆ ಎರಡು ಗೋಲುಗಳನ್ನು ತಂದಿತ್ತರು.

ಇತರ ಗೋಲುಗಳನ್ನು ಮೋತಿಲಾಲ್ ರಾಥೋಡ್ (8), ಮೊಹಮ್ಮದ್ ನಜೀಮ್ (22), ಫೆಲಿಕ್ಸ್ ಅಲ್ವಿನ್ (40) ಹಾಗೂ ಎಂ.ಎ. ವಿನೋದ್ ಚೆಂಗಪ್ಪ (43) ಗಳಿಸಿದರು. ಜಮ್ಮು ಮತ್ತು ಕಾಶ್ಮೀರ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.

ಕರ್ನಾಟಕ ತಂಡ ನಾಲ್ಕರಘಟ್ಟದ ಪಂದ್ಯದಲ್ಲಿ ಒಡಿಶಾ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಒಡಿಶಾ 5-0 ರಲ್ಲಿ ಎಂಟಿಎನ್‌ಎಲ್ ನವದೆಹಲಿ ವಿರುದ್ಧ ಸುಲಭ ಗೆಲುವು ಪಡೆಯಿತು. ಅನುರಂಜನ್ ಎಕ್ಕಾ (2), ಎಸ್.ಎ.ಎ. ಫಹೀಮ್ (4), ನಾರಾಯಣ ಮೊಹಂತಿ (10), ರಬಿಬರ್ ಎಕ್ಕಾ (25) ಮತ್ತು ಮಾಗಾ ಮುಂಡ (40) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಾರ್ಖಂಡ್ ಮತ್ತು ಎನ್‌ಟಿಆರ್ ನವದೆಹಲಿ ತಂಡಗಳು ಎದುರಾಗಲಿವೆ. ಜಾರ್ಖಂಡ್ 5-0 ಗೋಲುಗಳಿಂದ ಪಂಜಾಬ್ ವಿರುದ್ಧ ಜಯ ಪಡೆಯಿತು. ನವದೆಹಲಿಯ ಎನ್‌ಟಿಆರ್ ತಂಡ 4-1 ರಲ್ಲಿ ತಮಿಳುನಾಡು ತಂಡವನ್ನು ಮಣಿಸಿತು.

ಸೆಮಿಫೈನಲ್ ಪಂದ್ಯಗಳು ಮಂಗಳವಾರ ಬೆಳಿಗ್ಗೆ ನಡೆಯಲಿವೆ. ಫೈನಲ್ ಪಂದ್ಯ ಮಧ್ಯಾಹ್ನ 3.00 ಗಂಟೆಗೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.