ADVERTISEMENT

‘ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಮುಳುವಾಯಿತು’

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಪ್ರವೀಣ್‌ ಆಮ್ರೆ
ಪ್ರವೀಣ್‌ ಆಮ್ರೆ   

ಹೈದರಾಬಾದ್‌: ‘ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ನಮ್ಮ ಆಟಗಾರರು ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಗೆಲುವಿನ ಅವಕಾಶ ಕೈತಪ್ಪಿತು’ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಸಹಾಯಕ ಕೋಚ್ ಪ್ರವೀಣ್‌ ಆಮ್ರೆ ಹೇಳಿದ್ದಾರೆ.

ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೇರ್‌ಡೆವಿಲ್ಸ್‌ 7 ವಿಕೆಟ್‌ಗಳಿಂದ ಸೋತಿತ್ತು.

‘ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿದ್ದ ಪಿಚ್‌ನಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿಯೇ ಆಡಿದರು. ‘ಪವರ್‌ ಪ್ಲೇ’ಯಲ್ಲಿ ನಾವು 60ರನ್‌ಗಳನ್ನು ಕಲೆಹಾಕಿದ್ದೆವು. ಪೃಥ್ವಿ ಶಾ ಅಮೋಘ ಆಟ ಆಡಿದರು. ಬೌಲರ್‌ಗಳು ಪರಿಣಾಮಕಾರಿ ಸಾಮರ್ಥ್ಯ ತೋರಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವಿಜಯ್‌ ಶಂಕರ್‌ ಕ್ರಮವಾಗಿ ಅಲೆಕ್ಸ್‌ ಹೇಲ್ಸ್‌ ಮತ್ತು ಯೂಸುಫ್‌ ಪಠಾಣ್‌ ಅವರ ಕ್ಯಾಚ್‌ಗಳನ್ನು ಬಿಟ್ಟಿದ್ದು ನಮಗೆ ಮುಳುವಾಯಿತು’ ಎಂದು ತಿಳಿಸಿದ್ದಾರೆ.

ADVERTISEMENT

‘ಪೃಥ್ವಿ, ಪ್ರತಿ‌ಭಾವಂತ ಬ್ಯಾಟ್ಸ್‌ಮನ್‌. ಶಾಲಾ ಟೂರ್ನಿಗಳಲ್ಲಿ ಮಿಂಚಿದ್ದ ಆತ, ರಣಜಿ ಟ್ರೋಫಿ ಮತ್ತು ಈ ವರ್ಷ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲೂ ಗಮನ ಸೆಳೆದಿದ್ದ. ಈಗ ಐಪಿಎಲ್‌ನಲ್ಲೂ ಮೋಡಿ ಮಾಡುತ್ತಿದ್ದಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹಿಂದಿನ ಮೂರು ಪಂದ್ಯಗಳ ಗೆಲುವಿನಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿತ್ತು. ಆದರೆ ಡೆಲ್ಲಿ ಎದುರಿನ ಹಣಾಹಣಿಯಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಮಿಂಚಿದರು. ಎಲ್ಲರೂ ಜವಾವ್ದಾರಿ ಅರಿತು ಆಡುತ್ತಿದ್ದಾರೆ. ಹೀಗಾಗಿ ತಂಡ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ’ ಎಂದು ಸನ್‌ರೈಸರ್ಸ್‌ ತಂಡದ ಬೌಲರ್‌ ಭುವನೇಶ್ವರ್‌ ಕುಮಾರ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.