ಚಂಡೀಗಡ: ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಸನ್ಮಾನ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದ ₹ 4 ಲಕ್ಷ ಮೊತ್ತವನ್ನು ಕ್ರೀಡಾ ಇಲಾಖೆಯಿಂದ ಮಂಜೂರು ಮಾಡಲು ಹರಿಯಾಣ ಕ್ರೀಡಾ ಸಚಿವ ಅನಿಲ್ ವಿಜ್ ನಿರಾಕರಿಸಿದ್ದಾರೆ. ಆಲ್ಲದೇ ಬಿಲ್ ಮತ್ತು ಕಾರ್ಯಕ್ರಮದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.
ಈಚೆಗೆ ರೋಹ್ಟಕ್ ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ವಿಜ್ ಕೂಡ ಅತಿಥಿಯಾಗಿದ್ದರು. ಆ ಸಂದರ್ಭದಲ್ಲಿ ಸಾಕ್ಷಿ ಕುಟುಂಬದ ಸದಸ್ಯರೂ ಇದ್ದರು.
‘ಸಾಕ್ಷಿ ಮಲಿಕ್ ಅವರ ಕುಟುಂಬದ ಆಹ್ವಾನದ ಮೇರೆಗೆ ಚಹಾ ಕೂಟಕ್ಕೆ ಅತಿಥಿಯಾಗಿದ್ದೆ. ಆ ಕಾರಣಕ್ಕೆ ಬಿಲ್ ಮೊತ್ತ ಪಾವತಿಸಲು ಆಗದು’ ಎಂದು ವಿಜ್ ತಿಳಿಸಿದ್ದಾರೆ.
‘ಸನ್ಮಾನ ಸಮಾರಂಭವನ್ನು ನಾವು ಆಯೋಜಿಸಿರಲಿಲ್ಲ. ನಮಗೂ ಚಹಾಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಕ್ರೀಡಾ ಇಲಾಖೆಯೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಬಿಲ್ ಅನ್ನು ಸಚಿವರ ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ಸಾಕ್ಷಿ ಮಲಿಕ್ ಕುಟುಂಬ ಸ್ಪಷ್ಟಪಡಿಸಿದೆ.
ಕಾರ್ಯಕ್ರಮದ ನಂತರ ಕ್ರೀಡಾ ಇಲಾಖೆಯ ಅಧಿಕಾರಿಗಳು ಬಿಲ್ ಅನ್ನು ಕ್ರೀಡಾ ಸಚಿವಾಲಯಕ್ಕೆ ಕಳಿಸಿದ್ದರು. ಬಿಲ್ಗೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿದ ಸಚಿವರು ಎರಡು ಬಾರಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.