ಬೆಂಗಳೂರು: ಅರ್ಚನಾ ವೆಂಕಟರಾಮನ್ ಅವರು ಇಲ್ಲಿ ನಡೆಯುತ್ತಿರುವ ಎನರ್ಜಾಲ್ ಓಪನ್ ರಾಷ್ಟ್ರೀಯ ರ್ಯಾಂಕಿಂಗ್ ಟೆನಿಸ್ ಟೂರ್ನಿಯ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.
ಟೆನಿಸ್ ಎಕ್ಸಲೆನ್ಸ್ ಕೋರ್ಟ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅರ್ಚನಾ 6-2, 6-1ರಲ್ಲಿ ಪ್ರಾರ್ಥನಾ ಪ್ರತಾಪ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಬಾಲಕಿಯರ ವಿಭಾಗದ ಇತರ ಪಂದ್ಯಗಳಲ್ಲಿ ಸೌಜನ್ಯ 6-3, 6-0ರಲ್ಲಿ ಪ್ರೇರಣಾ ಪ್ರತಾಪ್ ಮೇಲೂ ಜಯ ಸಾಧಿಸಿದರು.
ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ತಮಿಳುನಾಡಿನ ವಿಜಯ್ ಸುಂದರ್ ಪ್ರಶಾಂತ್ 6-2, 6-4ರಲ್ಲಿ ಕರ್ನಾಟಕದ ಸಾಗರ್ ಮಂಜುನಾಥ್ ಮೇಲೆ ಗೆಲುವಿನ ನಗೆ ಬೀರಿದರು.
ಪಂದ್ಯದ ಆರಂಭದಿಂದಲೂ ಕರಾರುವಕ್ಕಾದ ಹೊಡೆತಗಳ ಮೂಲಕ ಎದುರಾಳಿ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದ ವಿಜಯ್ ಸುಲಭ ವಾಗಿ ಗೆಲುವನ್ನು ತಮ್ಮದಾಗಿಸಿಕೊಂಡರು.
ವಿನೋದ್ ಶ್ರೀಧರ್ 6-2, 6-0, ಆದಿತ್ಯಾ ತಿವಾರಿ ವಿರುದ್ಧವೂ, ನೀರಜ್ ಆನಂದ್ 2-6, 6-4, 6-3ರಲ್ಲಿ ಕುನಲ್ ಆನಂದ್ ಮೇಲೂ, ಮಿಥುನ್ ಮುರಳಿ 6-2, 4-6, 6-4ರಲ್ಲಿ ಅರವಿಂದ್ ಬೆಸ್ತಾ ವಿರುದ್ಧ ಗೆಲುವು ಪಡೆದರು.
ಬಾಲಕರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಥುನ್ ಮುರಳಿ-ಸುಂದರ್ ಪ್ರಶಾಂತ್ ಜೋಡಿ 6-3, 7-6, 6-2ರಲ್ಲಿ ಖಾನ್ ಶಹಬಾಜ್- ಕುಮಾರ್ ಸುರೇಶ್ ಮೇಲೂ ಗೆಲುವು ಪಡೆದರು.
ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಶೀತಲ್ ಗೌತಮ್ ಅವರು 0-6, 4-6ರಲ್ಲಿ ಇಶಾ ಲಖಾನಿ ವಿರುದ್ಧ ಸೋಲು ಅನುಭವಿಸಿದರು. ಇವರು ಮೊದಲನೇ ಸುತ್ತಿನಲ್ಲಿ ಮಹಾರಾಷ್ಟ್ರದ ಅನೈಶಾ ಪಿ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.