ಕೋಲ್ಕತ್ತ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ರಣಜಿ ಚಾಂಪಿಯನ್ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಆಸೆ ಹೊಂದಿದೆ. ಇದಕ್ಕಾಗಿ ವೇದಿಕೆಯೂ ಸಜ್ಜಾಗಿದ್ದು, ಶುಕ್ರವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಜಾರ್ಖಂಡ್ ಸವಾಲನ್ನು ಎದುರಿಸಬೇಕಿದೆ.
ಕರ್ನಾಟಕ ಹೋದ ವರ್ಷ ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ನಲ್ಲಿಯೇ ಬಂಗಾಳ ಎದುರು ನಿರಾಸೆ ಕಂಡಿತ್ತು. ಈ ಸಲ ಗುಜರಾತ್ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿ ಸಿದೆ. ಎದುರಾಳಿ ಜಾರ್ಖಂಡ್ ತಂಡ ವಿದರ್ಭ ವಿರುದ್ಧ ಜಯ ಪಡೆದಿತ್ತು.
ಈ ಸಲದ ದೇಶಿಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಅಮೋಘ ಪ್ರದರ್ಶನ ತೋರಿದ್ದಾರೆ. ಲಿಸ್ಟ್ ‘ಎ’ ಮತ್ತು ಪ್ರಥಮ ದರ್ಜೆ ಸೇರಿದಂತೆ ಹಿಂದಿನ 10 ಪಂದ್ಯಗಳಿಂದ ಅವರು 50 ವಿಕೆಟ್ ಉರುಳಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿ ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಪ್ರಮುಖ ಬಲ ಎನಿಸಿ ದ್ದಾರೆ. ಇವರಿಬ್ಬರೂ ಗುಜರಾತ್ ವಿರುದ್ಧ ಶತಕ ಸಿಡಿಸಿದ್ದರು.
‘ಇದು ಏಕದಿನ ಪಂದ್ಯ. ಎದುರಾಳಿ ತಂಡದ ಸಾಮರ್ಥ್ಯದ ಬಗ್ಗೆ ಮಾತ ನಾಡುವುದಿಲ್ಲ. ನಮ್ಮ ತಂಡದ ಶಕ್ತಿಯ ಬಗ್ಗೆಯಷ್ಟೇ ಯೋಚಿಸುತ್ತೇನೆ’ ಎಂದು ವಿನಯ್ ನುಡಿದರು. ಈ ಪಂದ್ಯ ಬೆಳಿಗ್ಗೆ 8.45ಕ್ಕೆ ಆರಂಭವಾಗಲಿದೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ರೈಲ್ವೇಸ್ ಹಾಗೂ ಬಂಗಾಳ ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.