ADVERTISEMENT

ಬೌಲಿಂಗ್‌ ಸುಧಾರಣೆ ಅಗತ್ಯ: ಅರುಣ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಲಾಹ್ಲಿ, ರೋಹ್ಟಕ್‌: ‘ನಮ್ಮ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿದೆ. ಬೌಲಿಂಗ್‌ನಲ್ಲಿ ಸುಧಾರಣೆ ಕಂಡು ಕೊಳ್ಳುವುದು ಅಗತ್ಯವಿದೆ. ಕೆಲ ಹಿರಿಯ ಆಟಗಾರರ ಅನುಪಸ್ಥಿತಿ ನಡುವೆಯೂ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ’ ಎಂದು ಕರ್ನಾಟಕ ತಂಡದ ಕೋಚ್‌ ಜೆ. ಅರುಣ್‌ ಕುಮಾರ್‌ ಹೇಳಿದರು.

ಗುರುವಾರ ಆಟಗಾರರ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ‘ಹರಿಯಾಣದ ಆರಂಭಿಕ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಬೇಗನೆ ಉರುಳಿಸಬೇಕು. ಪ್ರಾರಂಭದಲ್ಲಿ ಮುನ್ನಡೆ ಗಳಿಸಬೇಕು. ಹೋದ ವರ್ಷ ಹುಬ್ಬಳ್ಳಿಯಲ್ಲಿ ಆದ ರೀತಿ ಮತ್ತೊಮ್ಮೆ ಇಲ್ಲಿ ಆಗಬಾರದು’ ಎಂದು ಕರ್ನಾಟಕದ ಮಾಜಿ ಆಟಗಾರ ಕೂಡಾ ಆಗಿರುವ ಅರುಣ್‌ ನುಡಿದರು.

ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 392 ರನ್‌ ಗಳಿಸಿ ಇನಿಂಗ್ಸ್‌್ ಮುನ್ನಡೆ ಸಾಧಿಸಿತ್ತಲ್ಲದೇ, ಕರ್ನಾಟಕದ ಬೌಲರ್‌ಗಳನ್ನು ಸರಿಯಾಗಿಯೇ ದಂಡಿಸಿತ್ತು. ಆದ್ದರಿಂದ ಆ ಸಂದರ್ಭ ಮರುಕಳಿಸುವುದು ಬೇಡ ಎಂದು ಅವರು ಹೇಳಿದರು.

‘ಅತ್ಯುತ್ತಮ ಯಾರ್ಕರ್‌, ಶಾರ್ಟ್‌ ಬಾಲ್‌ ಎಸೆತಗಳನ್ನು ಹೆಚ್ಚಾಗಿ ಹಾಕಬೇಕು. ಇದರಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಾಗುತ್ತದೆ. ನಮ್ಮ ತಂಡಕ್ಕೆ ಅನುಭವಿ ಆಟಗಾರರೇ ಆಗಬೇಕೆಂದು ಏನೂ ಇಲ್ಲ. ಯುವ ಆಟಗಾರರೂ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಈ ಸಲ ನಮ್ಮ ತಂಡ ಒಂದೂ ಪಂದ್ಯದಲ್ಲೂ ಸೋಲು ಕಂಡಿಲ್ಲ’ ಎಂದು ಅರುಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.