ಬೆಂಗಳೂರು: ಮರಳುಗಾಡಿನಲ್ಲಿ ಬ್ದ್ದಿದ ಸುವಾಸನೆ ಭರಿತ ಹೂವಿನಂತಾಗಿದ್ದ ಅದೆಷ್ಟೊ ಕ್ರಿಕೆಟಿಗರ ಪ್ರತಿಭೆಯನ್ನು ಹೊರ ಚೆಲ್ಲಿದ ಕೀರ್ತಿ ಐಪಿಎಲ್ ಟೂರ್ನಿಯದ್ದು. .ಚಿನ್ನಸ್ವಾಮಿ ಕ್ರೀಡಾಂಗಣ ಅಂತಹ ಪ್ರತಿಭೆಯ ಅನಾವರಣಕ್ಕೆ ಗುರುವಾರ ರಾತ್ರಿ ವೇದಿಕೆಯಾಯಿತು. ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್ ಹಾಗೂ ಕರುಣ್ ನಾಯರ್ ವಿಕೆಟ್ ಪಡೆದು, ರಾಯಲ್ ಚಾಲೆಂಜರ್ಸ್ ಮೇಲೆ ಒತ್ತಡ ಹೇರಿದ ಆ ಹುಡುಗನ ಹೆಸರು ಜಸ್ಪ್ರಿತ್ ಬುಮ್ರಾ.
19ರ ಹರೆಯದ ಜಸ್ಪ್ರಿತ್ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದರು. ಕೊಹ್ಲಿ ಕೆಲ ಬೌಂಡರಿ ಬಾರಿಸುತ್ತಿದ್ದಂತೆ ಸಚಿನ್ ಹಾಗೂ ಪಾಂಟಿಂಗ್ ಸನಿಹ ಬಂದು `ಹೆದರಬೇಡ; ಧೈರ್ಯದಿಂದ ಬೌಲ್ ಮಾಡು' ಎಂದು ಬೆನ್ನು ತಟ್ಟಿ ಹೋದರು. ನಂತರದ ಎಸೆತದಲ್ಲಿಯೇ ಕೊಹ್ಲಿ ಔಟ್.
ವಿಶೇಷವೆಂದರೆ ಜಸ್ಪ್ರಿತ್ ರಣಜಿ ಪಂದ್ಯ ಕೂಡ ಆಡಿಲ್ಲ. ಆದರೆ ಇಂದೋರ್ನಲ್ಲಿ ಇತ್ತೀಚೆಗಷ್ಟೇ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಗುಜರಾತ್ ತಂಡದ ಪರ ಬುಮ್ರಾ ಉತ್ತಮ ಪ್ರದರ್ಶನ ತೋರಿದ್ದರು. ಫೈನಲ್ನಲ್ಲಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.
ಹಾಗಾಗಿ ಈ ಬಾರಿ ಜಸ್ಪ್ರಿತ್ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಲಭಿಸಿತ್ತು. ನೆಟ್ಸ್ನಲ್ಲಿ ಈ ಹುಡುಗನ ಬೌಲಿಂಗ್ ವೀಕ್ಷಿಸಿದ್ದ ಸಚಿನ್ ಈ ಪಂದ್ಯದಲ್ಲಿ ಅವಕಾಶ ನೀಡಿದ್ದರು. ಅದನ್ನು ಜಸ್ಪ್ರಿತ್ ಸಮರ್ಥಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.