ADVERTISEMENT

ಚೆನ್ನೈ ‘ಸ್ನೇಹಿತ’ರ ಸವಾಲ್

ಕಿಂಗ್ಸ್‌ ಇಲೆವನ್ ಪಂಜಾಬ್ –ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಹಣಾಹಣಿ ಇಂದು

ಪಿಟಿಐ
Published 26 ಮಾರ್ಚ್ 2019, 16:44 IST
Last Updated 26 ಮಾರ್ಚ್ 2019, 16:44 IST
ಆರ್. ಅಶ್ವಿನ್
ಆರ್. ಅಶ್ವಿನ್   

ಕೋಲ್ಕತ್ತ : ‘ಮಂಕಡ್‌ ರನ್‌ಔಟ್’ ಮಾದರಿಯಲ್ಲಿ ಜೋಸ್ ಬಟ್ಲರ್‌ ಅವರನ್ನು ಔಟ್ ಮಾಡಿದ ರವಿಚಂದ್ರನ್ ಅಶ್ವಿನ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಸೆಣಸಲಿದೆ.

ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ತಮಿಳುನಾಡಿನ ಅಶ್ವಿನ್ ಅವರ ಬಳಗಕ್ಕೆ ಅವರ ತವರಿನ ಸ್ನೇಹಿತ ದಿನೇಶ್ ಕಾರ್ತಿಕ್ ಬಳಗವು ಸವಾಲೊಡ್ಡಲಿದೆ.

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸೋಮವಾರದ ಪಂದ್ಯದಲ್ಲಿ ಅಬ್ಬರಿಸಿದ್ದರು. ಅದರಿಂದಾಗಿ ಕಿಂಗ್ಸ್‌ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಆತ್ಮವಿಶ್ವಾಸ ತುಂಬಿದೆ. ಅವರು 47 ಎಸೆತಗಳಲ್ಲಿ 79 ರನ್‌ ಗಳಿಸಿದ್ದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 184 ರನ್‌ ಗಳಿಸಿತ್ತು. ಜೋಸ್ ಬಟ್ಲರ್ ‘ರನ್‌ಔಟ್’ ಆಗುವವರೆಗೂ ರಾಜಸ್ಥಾನ ತಂಡವು ಗೆಲ್ಲುವ ಭರವಸೆ ಇತ್ತು. ಆದರೆ ಬಟ್ಲರ್ ಔಟಾದ ನಂತರ ನಾಟಕೀಯ ರೀತಿಯಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಕುಸಿದರು. ಇದರಿಂದಾಗಿ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಅಶ್ವಿನ್ ಬಳಗವು ಇಲ್ಲಿಯೂ ಜಯದ ‘ರಸಗುಲ್ಲ’ ಸವಿಯುವ ಹುಮ್ಮಸ್ಸಿನಲ್ಲಿದೆ.

ADVERTISEMENT

ತಂಡದಲ್ಲಿರುವ ಕರ್ನಾಟಕದ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಅವರು ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ಮಾಡುವ ಅಗತ್ಯವಿದೆ. ಸರ್ಫರಾಜ್ ಖಾನ್ ಲಯದಲ್ಲಿರುವುದು ಮಧ್ಯಮ ಕ್ರಮಾಂಕದಲ್ಲಿ ಸಮಾಧಾನ ಮೂಡಿಸಿದೆ.

ಬೌಲಿಂಗ್ ವಿಭಾಗದಲ್ಲಿ ಸ್ಯಾಮ್ ಕರನ್ ತಮ್ಮ ಲಯಕ್ಕೆ ಮರಳಬೇಕಿದೆ. ಅನುಭವಿ ಬೌಲರ್ ಮೊಹಮ್ಮದ್ ಶಮಿ ಮತ್ತು ಬಾಂಗ್ಲಾದ ಮುಜೀಬ್ ಉರ್ ರೆಹಮಾನ್, ಸ್ಪಿನ್ನರ್ ಅಶ್ವಿನ್ ಅವರು ಬಿಗಿ ದಾಳಿ ನಡೆಸಿದರೆ, ಕೆಕೆಆರ್ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವುದು ಕಷ್ಟವಲ್ಲ.

ತಮಿಳುನಾಡು ತಂಡದಲ್ಲಿ ಅಶ್ವಿನ್ ಜೊತೆಗೆ ಆಡುವ ದಿನೇಶ್ ಕಾರ್ತಿಕ್ ಬಳಗವೂ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಜಯಿಸಿತ್ತು. ಕ್ರಿಸ್‌ ಗೇಲ್ ತವರೂರು ಜಮೈಕಾದವರೇ ಆದ ಆ್ಯಂಡ್ರೆ ರಸೆಲ್ ಆ ಪಂದ್ಯದಲ್ಲಿ ಮಿಂಚಿದ್ದರು.

ಆಲ್‌ರೌಂಡರ್‌ ಸುನಿಲ್‌ ನಾರಾಯಣ್ ಮತ್ತು ಸ್ಪಿನ್ನರ್ ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್ ಅವರು ಪಂಜಾಬ್ ತಂಡಕ್ಕೆ ಕಠಿಣ ಸವಾಲೊಡ್ಡುವ ನಿರೀಕ್ಷೆದೆ.

ಕೆಕೆಆರ್‌ನಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಯುವ ಆಟಗಾರ ಶುಭಮನ್ ಗಿಲ್ ಮತ್ತು ಕ್ರೇಗ್‌ ಬ್ರಾಥ್‌ವೈಟ್ ಅವರು ಬ್ಯಾಟಿಂಗ್ ವಿಭಾಗದ ಭರವಸೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.