ADVERTISEMENT

ಚಾಣಾಕ್ಷ ನಾಯಕ ವಾಡೇಕರ್‌

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:45 IST
Last Updated 22 ಡಿಸೆಂಬರ್ 2018, 19:45 IST
ಅಜಿತ್ ವಾಡೇಕರ್‌
ಅಜಿತ್ ವಾಡೇಕರ್‌   

ಕ್ರಿಕೆಟ್‌ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಅಜಿತ್‌ ವಾಡೇಕರ್‌ ಕೂಡಾ ಒಬ್ಬರು.

ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ‘ಹ್ಯಾಟ್ರಿಕ್‌’ ಟೆಸ್ಟ್‌ ಸರಣಿ ಗೆದ್ದುಕೊಟ್ಟ ಮೊದಲ ನಾಯಕ ಎಂಬ ಹಿರಿಮೆ ಹೊಂದಿದ್ದ ಅಜಿತ್‌ ಈ ವರ್ಷದ ಆಗಸ್ಟ್‌ 15ರಂದು ನಿಧನರಾದರು. ಆಗ ಅವರಿಗೆ 77 ವರ್ಷ.

ಚುರುಕಿನ ಪಾದಚಲನೆ ಮತ್ತು ಕಲಾತ್ಮಕ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದ ಅಜಿತ್‌, ಅತ್ಯುತ್ತಮ ‘ಸ್ಲಿಪ್‌ ಫೀಲ್ಡರ್‌’ ಮತ್ತು ಚಾಣಾಕ್ಷ ನಾಯಕನೆಂದೇ ಹೆಸರಾಗಿದ್ದರು.

ADVERTISEMENT

1971ರ ಮಾತು. ಆಗ ಭಾರತ ತಂಡ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಇಂಗ್ಲೆಂಡ್‌ ಪ್ರವಾಸ ಕೈಗೊಂಡಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ವಾಡೇಕರ್‌ ಬಳಗ, ಮೂರನೇ ಹೋರಾಟದಲ್ಲಿ ಕ್ರಿಕೆಟ್‌ ಜನಕರ ನಾಡಿನ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿತ್ತು. ಇಂಗ್ಲೆಂಡ್‌ ನೆಲದಲ್ಲಿ ಭಾರತ ಗೆದ್ದ ಚೊಚ್ಚಲ ಸರಣಿ ಅದಾಗಿತ್ತು. ವೆಸ್ಟ್‌ ಇಂಡೀಸ್‌ನಲ್ಲೂ ಅಜಿತ್‌ ಪಡೆ ಸರಣಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. 1972–73ರಲ್ಲಿ ಇಂಗ್ಲೆಂಡ್‌ ತಂಡ ಐದು ಪಂದ್ಯಗಳ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿದ್ದರು. ಅದರಲ್ಲಿ ಭಾರತ ತಂಡ 2–1ರಿಂದ ಸರಣಿ ಗೆದ್ದು ಬೀಗಿದ್ದರು. ಆಗಲೂ ಭಾರತ ತಂಡ ಚುಕ್ಕಾಣಿ ಹಿಡಿದಿದ್ದು ಇದೇ ವಾಡೇಕರ್‌.

ಎಂಜಿನಿಯರ್‌ ಆಗಬೇಕೆಂಬ ಕನಸು ಹೊತ್ತಿದ್ದ ವಾಡೇಕರ್‌, ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟಿದ್ದು ಆಕಸ್ಮಿಕ. ಭಾರತದ ಹಿರಿಯ ಸ್ಪಿನ್ನರ್‌ ಬಾಳು ಗುಪ್ತೆ ಮತ್ತು ಅಜಿತ್‌ ಒಮ್ಮೆ ಬಸ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಗುಪ್ತೆ ಆಡಿದ ಮಾತುಗಳು ಅಜಿತ್‌ ಅವರಲ್ಲಿ ಕ್ರಿಕೆಟ್‌ ಕುರಿತು ಆಸಕ್ತಿ ಮೊಳೆಯುವಂತೆ ಮಾಡಿತು. ಅಂದೇ ಕ್ರಿಕೆಟಿಗನಾಗಬೇಕೆಂದು ಪಣ ತೊಟ್ಟ ಅಜಿತ್‌, ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿದರು.

1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾಡೇಕರ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಎಂಟು ವರ್ಷಗಳ ನಂತರ. 1966ರಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್‌ ಆಡಿದ ಅವರು ಸಿಕ್ಕ ಅವಕಾಶಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಭಾರತ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಂಡರು. ಕ್ರಮೇಣ ಅವರಿಗೆ ನಾಯಕತ್ವದ ಪಟ್ಟವೂ (1971ರಲ್ಲಿ) ಒಲಿಯಿತು. ಈ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ ಅವರು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

1967ರ ಫೆಬ್ರುವರಿಯಲ್ಲಿ ಬಾಂಬೆಯಲ್ಲಿ ನಡೆದಿದ್ದ ಮೈಸೂರು ಎದುರಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಅಜಿತ್‌ ಪಾಲಿಗೆ ಅವಿಸ್ಮರಣೀಯ. ಆ ಹೋರಾಟದಲ್ಲಿ ತ್ರಿಶತಕ (323) ಸಿಡಿಸಿ ದೇಶಿ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಬಳಿಕ ಅವರು ಭಾರತ ಸೀನಿಯರ್‌ ತಂಡ ಮ್ಯಾನೇಜರ್‌ ಆಗಿಯೂ ಕೆಲಸ ಮಾಡಿದ್ದರು. ಅವರ ಸಾಧನೆಗೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.