ಸುನಿಲ್ ಗವಾಸ್ಕರ್–ಸೂರ್ಯಕುಮಾರ್ ಯಾದವ್
ದುಬೈ: ಒಮಾನ್ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ 21 ರನ್ಗಳ ಗೆಲುವು ಸಾಧಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬಲ ಹೆಚ್ಚಿಸಲು 8 ವಿಕೆಟ್ ಕಳೆದುಕೊಂಡಾಗಲು ಬ್ಯಾಟಿಂಗ್ ಮಾಡಲು ಬಾರದ ನಾಯಕ ಸೂರ್ಯಕುಮಾರ್ ನಿರ್ಧಾರವನ್ನು ಸುನಿಲ್ ಗವಾಸ್ಕರ್ ಬೆಂಬಲಿಸಿದ್ದಾರೆ.
ಟೀಂ ಇಂಡಿಯಾ ಯುಎಇ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧದ ಸುಲಭ ಗೆಲುವಿನ ಬಳಿಕ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿತ್ತು. ಹಾಗಾಗಿ ಒಮಾನ್ ವಿರುದ್ಧದ ಪಂದ್ಯ ಅಷ್ಟೇನು ಮಹತ್ವದ್ದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂಡದ ಬ್ಯಾಟಿಂಗ್ ಆರ್ಡರ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡು ಮೈದಾನಕ್ಕೆ ಇಳಿದಿದ್ದರು. ವಿಶೇಷವಾಗಿ ನಾಯಕ ಸೂರ್ಯಕುಮಾರ್ ಕೆಳ ಕ್ರಮಾಂಕದ ಬ್ಯಾಟಿಂಗ್ಗೆ ಒತ್ತು ನೀಡುವ ಉದ್ದೇಶದಿಂದ ತಾವು 11ನೇ ಬ್ಯಾಟರ್ ಆಗಿ ಆಡಲು ನಿರ್ಧರಿಸಿದರು.
ಸೂರ್ಯಕುಮಾರ್ ಅವರ ಈ ನಿರ್ಧಾರದ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಸೂರ್ಯಕುಮಾರ್ ಯಾದವ್ ಅವರು ಕೇವಲ ಒಂದು ಓವರ್ ಬ್ಯಾಟಿಂಗ್ ಮಾಡಿದ್ದರೂ ಬೌಂಡರಿ, ಸಿಕ್ಸರ್ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸಬಹುದಿತ್ತು. ಆದರೆ ಪಾಕಿಸ್ತಾನ ವಿರುದ್ಧ ಅವರು ಆಡಿದ ಆಟದಿಂದಾಗಿ ಅವರಿಗೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸದ ಅಗತ್ಯವಿಲ್ಲ ಎನಿಸಿರಬಹುದು ಎಂದರು.
ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಒಂದುವೇಳೆ ಭಾರತ ತಂಡ ಬೇಗನೆ ವಿಕೆಟ್ಗಳನ್ನು ಕಳೆದುಕೊಂಡರೆ ಕುಲದೀಪ್ ಯಾದವ್ ಅವರ ಬ್ಯಾಟಿಂಗ್ ಕೂಡ ಅಗತ್ಯಕ್ಕೆ ಬರಬಹುದು ಎಂದು ಸೂರ್ಯ ಭಾವಿಸಿರಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.