ADVERTISEMENT

Asia Cup:ಗಿಲ್ ಕಮ್‌ಬ್ಯಾಕ್ ಖುಷಿಯಾಗಿದೆ, ಜಿತೇಶ್ ಸ್ಥಾನ ಸಂಪಾದಿಸಿದ್ದಾರೆ;ಸೂರ್ಯ

ಪಿಟಿಐ
Published 19 ಆಗಸ್ಟ್ 2025, 12:40 IST
Last Updated 19 ಆಗಸ್ಟ್ 2025, 12:40 IST
   

ಮುಂಬೈ: ಸೆಪ್ಟೆಂಬರ್ 9ರಿಂದ ದುಬೈನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಸರಣಿಗಾಗಿ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಶುಭಮನ್ ಗಿಲ್ ಸೇರ್ಪಡೆಯು ಸಂತಸ ತಂದಿದೆ ಎಂದು ಭಾರತ ಟಿ–20 ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ.

ಟೆಸ್ಟ್ ತಂಡದ ನೂತನ ನಾಯಕರಾಗಿರುವ ಗಿಲ್ ಅವರು ಕಳೆದ ವರ್ಷ ಜುಲೈನಲ್ಲಿ ಕಡೆಯ ಬಾರಿಗೆ ಟಿ20 ಪಂದ್ಯ ಆಡಿದ್ದರು. ಏಷ್ಯಾ ಕಪ್ ಟಿ20 ಟೂರ್ನಿಗೆ ಮಂಗಳವಾರ ಘೋಷಣೆಯಾದ ಭಾರತ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದ್ದು, ಉಪನಾಯಕನ ಹೊಣೆ ನೀಡಲಾಗಿದೆ.

ಕಳೆದ ವರ್ಷ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲೂ ಗಿಲ್ ಇರಲಿಲ್ಲ. ಅದ್ಭುತ ಐಪಿಎಲ್ ಸರಣಿ ಮತ್ತು ನಂತರದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2–2ರಿಂದ ಭಾರತ ಸರಣಿಯಲ್ಲಿ ಸಮಬಲ ಸಾಧಿಸಿತ್ತು.

ADVERTISEMENT

ವಿಶ್ವಕಪ್ ನಂತರ ಶ್ರೀಲಂಕಾ ಪ್ರವಾಸದಲ್ಲಿ ಗಿಲ್ ಇದ್ದರು. ನಾನು ನಾಯಕತ್ವ ವಹಿಸಿದ್ದೆ. ಗಿಲ್ ಉಪನಾಯಕರಗಿದ್ದರು. ಬಳಿಕ, ಟೆಸ್ಟ್ ಕ್ರಿಕೆಟ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ನಿರತರಾಗಿದ್ದರಿಂದ ಟಿ–20 ಆಡಲು ಅವಕಾಶ ಸಿಕ್ಕಿರಲಿಲ್ಲ. ಈಗ ಅವರು ತಂಡಕ್ಕೆ ಮರಳಿರುವುದು ಸಂತಸ ತಂದಿದೆ ಎಂದು ಸೂರ್ಯ ಕುಮಾರ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಜೊತೆ ಎರಡನೇ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗುವಲ್ಲಿ ಅವರ ಪ್ರದರ್ಶನವು ರಾಷ್ಟ್ರೀಯ ತಂಡಕ್ಕೆ ವಾಪಸ್ ಆಗಲು ನೆರವಾಗಿದೆ ಎಂದಿದ್ದಾರೆ.

‘ಜಿತೇಶ್ ಶರ್ಮಾ ವಿಭಿನ್ನ ಕ್ರಿಕೆಟಿಗರಾಗಿ ಹೊರ ಹೊಮ್ಮಿದ್ದಾರೆ. ಐ‍ಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಸ್ಥಾನ ಭದ್ರ‍ಪಡಿಸಿಕೊಂಡಿದ್ದಾರೆ’ ಎಂದು ಸೂರ್ಯ ಹೆಳಿದರು.

ತಂಡದಲ್ಲಿ ವೇಗಿ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದನ್ನೂ ಸಮರ್ಥಿಸಿಕೊಂಡ ಸೂರ್ಯ,, ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಭಾರತ ತಂಡದ ಪರ ಕಡೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಗೌರವ ಪಡೆದಿದ್ದಾರೆ. ಅವರ ಕೌಶಲ್ಯ ಮತ್ತು ಪ್ರದರ್ಶನದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.