ದುಬೈ: ಭಾನುವಾರ ಭಾರತ ವಿರುದ್ಧ ನಡೆದ ಏಷ್ಯಾ ಕಪ್ ಟಿ20 ಪಂದ್ಯದ ಸಮಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್ನಿಂದ ತಕ್ಷಣ ವಜಾಗೊಳಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೋಮವಾರ ಒತ್ತಾಯಿಸಿದೆ.
ಪಂದ್ಯದ ಆರಂಭ ಮತ್ತು ಕೊನೆಯಲ್ಲಿ ಭಾರತ ತಂಡದ ಆಟಗಾರರು, ಪಾಕಿಸ್ತಾನದ ಆಟಗಾರರ ಜೊತೆ ಕೈಕುಲುಕಲಿಲ್ಲ. ಇದು ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ರೆಫರಿ ವಿರುದ್ಧ ಪಿಸಿಬಿ, ಐಸಿಸಿಗೆ ಅಧಿಕೃತ ದೂರು ದಾಖಲಿಸಿದೆ.
‘ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳು ಮ್ಯಾಚ್ ರೆಫರಿಯಿಂದ ಉಲ್ಲಂಘನೆಯಾಗಿರುವ ಬಗ್ಗೆ ಪಿಸಿಬಿ, ಐಸಿಸಿಗೆ ದೂರು ನೀಡಿದೆ. ಏಷ್ಯಾ ಕಪ್ನಿಂದ ಮ್ಯಾಚ್ ರೆಫರಿಯನ್ನು ತಕ್ಷಣ ವಜಾಗೊಳಿಸಬೇಕೆಂದು ಪಿಸಿಬಿ ಒತ್ತಾಯಿಸಿದೆ’ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಏಷ್ಯಾ ಕ್ರಿಕೆಟ್ ಮಂಡಳಿ(ಎಸಿಸಿ) ಬಳಿ ಪ್ರತಿಭಟನೆ ದಾಖಲಿಸಿದ್ದ ಪಿಸಿಬಿ, ಭಾರತೀಯ ಆಟಗಾರರ ನಡೆ ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಿತ್ತು.
ಭಾರತೀಯ ಆಟಗಾರರು ಕೈಕುಲುಕದೇ ಇರುವುದರ ವಿರುದ್ಧ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದಾಗಿದೆ. ಪ್ರತಿಭಟನೆಯಾಗಿ ನಾವು ನಮ್ಮ ನಾಯಕನನ್ನು ಪಂದ್ಯದ ನಂತರದ ಪ್ರಶಸ್ತಿ ಕಾರ್ಯಕ್ರಮಕ್ಕೆ ಕಳುಹಿಸಲಿಲ್ಲ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
d
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.