ಮೆಲ್ಬರ್ನ್: ಮೊದಲೆರಡು ಪಂದ್ಯಗಳಲ್ಲಿ ಸವಾಲಿನ ಮೊತ್ತ ಪೇರಿಸಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಇಲ್ಲಿನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಿಂಚಲು ವಿಫಲವಾದರು. ಆತಿಥೇಯರನ್ನು 230ರನ್ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಲು ನೆರವಾದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ದ್ವಿಪಕ್ಷೀಯ ಸರಣಿ ಗೆಲ್ಲುವ ಭಾರತದ ಕನಸಿಗೆ ವೇದಿಕೆ ಸಿದ್ಧಪಡಿಸಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದ ಬೌಲರ್ಗಳು ಆತಿಥೇಯರಿಗೆ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಹತ್ತು ಓವರ್ ಮುಗಿಯುವ ಮುನ್ನವೇ ಆರಂಭಿಕರಿಬ್ಬರನ್ನೂ ಪೆವಿಲಿಯನ್ಗೆ ಕಳುಹಿಸಿದ ಭುವನೇಶ್ವರ್ ಕುಮಾರ್, ಆಸಿಸ್ರನ್ ಗಳಿಕೆಗೆ ತಡೆ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿಉಸ್ಮಾನ್ ಖ್ವಾಜಾ(34) ಹಾಗೂ ಶಾನ್ ಮಾರ್ಷ್(39) ಹಾಗೂಪೀಟರ್ ಹ್ಯಾಂಡ್ಸ್ಕಂಬ್(58) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಪ್ರವಾಸಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರಾದರೂ, ತಮ್ಮ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವಲ್ಲಿ ವಿಫಲವಾದರು.
ಭಾರತ ಪರ ಉತ್ತಮ ದಾಳಿ ಸಂಘಟಿಸಿದ ಚಹಾಲ್ 10 ಓವರ್ಗಳಲ್ಲಿ 42ರನ್ ನೀಡಿ ಆರು ವಿಕೆಟ್ ಕಬಳಿಸಿದರು.ಉಳಿದಂತೆ ಭುವನೇಶ್ವರ್ ಕುಮಾರ್ ಹಾಗು ಮೊಹಮದ್ ಶಮಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಮೊದಲ ಪಂದ್ಯದಲ್ಲಿ 34ರನ್ ಅಂತರ ಸೋಲು ಕಂಡಿದ್ದ ಕೊಹ್ಲಿ ಪಡೆ, ಎರಡನೇ ಪಂದ್ಯವನ್ನು ಆರು ವಿಕೆಟ್ಗಳಿಂದ ಗೆದ್ದು ಬೀಗಿತ್ತು.ಹೀಗಾಗಿ ತಲಾ ಒಂದು ಪಂದ್ಯಗಳಲ್ಲಿ ಗೆಲುವು ಕಂಡಿರುವ ಉಭಯ ತಂಡಗಳು ಸರಣಿ ಜಯಿಸಬೇಕಾದರೆ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.