
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಸೋಮವಾರ ಸುದರ್ಶನ ಹೋಮ ಮತ್ತು ಶಾಂತಿಪೂಜೆಯನ್ನು ನೆರವೇರಿಸಲಾಯಿತು.
ಇತ್ತೀಚೆಗಷ್ಟೇ ಹೊಸದಾಗಿ ಚುನಾಯಿತರಾಗಿರುವ ಆಡಳಿತ ಸಮಿತಿಯು ಈ ಪೂಜೆಯನ್ನು ಹಮ್ಮಿಕೊಂಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ಕಟ್ಟಡದಲ್ಲಿರುವ ಸಭಾಂಗಣದಲ್ಲಿ ಹೋಮ ಹಾಗೂ ಧಾರ್ಮಿಕ ಕಾರ್ಯಗಳನ್ನು ಪುರೋಹಿತರ ಬಳಗವು ನೆರವೇರಿಸಿತು.
‘ನಮ್ಮ ಸಮಿತಿಯು ಹೊಸದಾಗಿ ಚುನಾಯಿತವಾಗಿದೆ. ಈ ಹಿಂದೆ ಕೆಲವು ಇಲ್ಲಿ ಕೆಲವು ಕಹಿ ಘಟನೆಗಳು ನಡೆದಿವೆ. ಅವುಗಳೆಲ್ಲ ಪರಿಹಾರವಾಗಿ ನಮ್ಮ ಸಮಿತಿಯ ಅವಧಿಯಲ್ಲಿ ಎಲ್ಲವೂ ಉತ್ತಮ ಕಾರ್ಯಗಳು ನೆರವೇರಲಿ ಎಂಬ ಆಶಯದೊಂದಿಗೆ ಸುದರ್ಶನ ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಮ್ಮೆಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಕಳೆದ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಂಡದ ವಿಜಯೋತ್ಸವವನ್ನು ಆಯೋಜಿಸಲಾಗಿದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 11 ಜನ ಅಭಿಮಾನಿಗಳು ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು.
ಕ್ರೀಡಾಂಗಣದಲ್ಲಿ ಹಲವು ಗೇಟ್ಗಳಿಗೂ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೆಎಸ್ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.