ADVERTISEMENT

ಜೂನ್ 4 ರಿಂದ ಬೆಂಗಳೂರಿನಲ್ಲಿ ರಣಜಿ ಟ್ರೋಫಿ ನಾಕೌಟ್

ಕರ್ನಾಟಕ –ಉತ್ತರಪ್ರದೇಶ ಹಣಾಹಣಿ: 24ರವರೆಗೆ ಟೂರ್ನಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 11:03 IST
Last Updated 28 ಏಪ್ರಿಲ್ 2022, 11:03 IST
ಚಿನ್ನಸ್ವಾಮಿ ಕ್ರೀಡಾಂಗಣ 
ಚಿನ್ನಸ್ವಾಮಿ ಕ್ರೀಡಾಂಗಣ    

ಬೆಂಗಳೂರು: ಕರ್ನಾಟಕ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡಗಳು ಜೂನ್ 4 ರಿಂದ 8ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ (ಬಿಸಿಸಿಐ ಡಾಟ್ ಟಿವಿ)ನಲ್ಲಿ ರಣಜಿ ಟ್ರೋಫಿ ನಾಕೌಟ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಗುಂಪು ಹಂತದ ಪಂದ್ಯಗಳು ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಬೇರೆ ಬೇರೆ ನಗರಗಳಲ್ಲಿ ಆಯೋಜನೆಗೊಂಡಿದ್ದವು.

ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಗೂ ಮುನ್ನ ಈ ಪಂದ್ಯಗಳು ನಡೆದಿದ್ದವು. ಮೇ 29ರಂದು ಐಪಿಎಲ್ ಫೈನಲ್ ಮುಗಿಯಲಿದೆ. ಜೂನ್ ಮೊದಲ ವಾರದಲ್ಲಿ ರಣಜಿ ನಾಕೌಟ್ ಹಂತದ ಪಂದ್ಯಗಳನ್ನು ಆಯೋಜಿಸಲಗುವುದು ಎಂದು ಈ ಹಿಂದೆಯೇ ಮಂಡಳಿಯು ಹೇಳಿತ್ತು.

ADVERTISEMENT

ಕರ್ನಾಟಕ ತಂಡವು ಸಿ ಗುಂಪಿನಲ್ಲಿ ಪ್ರಥಮ ಸ್ಥಾನ ಗಳಿಸಿ ಎಂಟರ ಘಟ್ಟಕ್ಕೆ ನೇರ ಪ್ರವೇಶ ಪಡೆದಿತ್ತು. ಉತ್ತರಪ್ರದೇಶ ಜಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನ ಮತ್ತು ಜಸ್ಟ್ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಜೂನ್ 12ರಿಂದ 16ರವರೆಗೆ ಸೆಮಿಫೈನಲ್‌ ಮತ್ತು 20 ರಿಂದ 24ರವರೆಗೆ ಫೈನಲ್ ಪಂದ್ಯಗಳು ನಡೆಯಲಿವೆ.

ಕ್ವಾರ್ಟರ್‌ಫೈನಲ್ ಪಂದ್ಯಗಳು

ಕರ್ನಾಟಕ–ಉತ್ತರ ಪ್ರದೇಶ

ಬಂಗಾಳ–ಜಾರ್ಖಂಡ್

ಮುಂಬೈ–ಉತ್ತರಾಖಂಡ

ಪಂಜಾಬ್–ಮಧ್ಯಪ್ರದೇಶ

ದಿನಾಂಕ: ಜೂನ್ 4 ರಿಂದ 8

ಸೆಮಿಫೈನಲ್ ಪಂದ್ಯಗಳು

ದಿನಾಂಕ: ಜೂನ್ 12 ರಿಂದ 16

ಫೈನಲ್

ಜೂನ್ 20 ರಿಂದ 24

ಸ್ಥಳ: ಬೆಂಗಳೂರು, ಆಲೂರು.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.