ಅಬುಧಾಬಿ: ರಾಜಸ್ಥಾನ ಬೌಲರ್ಗಳ ದಾಳಿಗೆ ನಲುಗಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಐದು ವಿಕೆಟ್ ಕಳೆದುಕೊಂಡು 125 ರನ್ ಕಲೆ ಹಾಕಿತು.
ಐಪಿಎಲ್ನಲ್ಲಿ 200ನೇ ಪಂದ್ಯ ಆಡಿದ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಬ್ಯಾಟ್ಸ್ಮನ್ಗಳಾದ ಸ್ಯಾಮ್ ಕರನ್ ಮತ್ತು ಫಾಫ್ ಡು ಪ್ಲೆಸಿ ಜೋಡಿಯನ್ನು ರಾಜಸ್ಥಾನ ರಾಯಲ್ಸ್ ಬೌಲರ್ಗಳು ಕಾಡಿದರು. ಹೀಗಾಗಿ ಮೂರು ಓವರ್ಗಳಲ್ಲಿ 13 ರನ್ ಸೇರಿಸಲಷ್ಟೇ ಅವರಿಗೆ ಸಾಧ್ಯವಾಯಿತು. ಮೂರನೇ ಓವರ್ನ ಕೊನೆಯ ಎಸೆತದಲ್ಲಿ ಫಾಫ್ ಡು ಪ್ಲೆಸಿ ವೇಗಿ ಜೊಫ್ರಾ ಆರ್ಚರ್ ಎಸೆತದಲ್ಲಿ ಔಟಾದರು. ಮತ್ತೆ 13 ರನ್ ಸೇರಿಸುವಷ್ಟರಲ್ಲಿ ಶೇನ್ ವಾಟ್ಸನ್ ಕೂಡ ಮರಳಿದರು. ಯುವ ಮಧ್ಯಮ ವೇಗಿ ಕಾರ್ತಿಕ್ ತ್ಯಾಗಿಗೆ ವಾಟ್ಸನ್ ವಿಕೆಟ್ ಒಪ್ಪಿಸಿದರು.
ಒಂದು ತುದಿಯಲ್ಲಿ ಸ್ಯಾಮ್ ಕರನ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ 25 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 22 ರನ್ ಗಳಿಸಿದರು. ಆದರೆ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಎಸೆತದ ಗತಿ ನಿರ್ಣಯಿಸುವಲ್ಲಿ ಎಡವಿ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿದರು. ಅಂಬಟಿ ರಾಯುಡು ಅವರಿಗೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಆಗಲಿಲ್ಲ. 56 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡದ ಇನಿಂಗ್ಸ್ಗೆ ಬಲ ತುಂಬಲು ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಪ್ರಯತ್ನಿಸಿದರು. ಇಬ್ಬರೂ 51 ರನ್ ಸೇರಿಸಿದರು. 18ನೇ ಓವರ್ನಲ್ಲಿ ಧೋನಿ ಎಡವಟ್ಟು ಮಾಡಿಕೊಂಡು ರನ್ ಔಟ್ ಆದರು. ಮೊದಲ ರನ್ ನಿಧಾನವಾಗಿ ಗಳಿಸಿದ ಅವರು ಎರಡನೇ ರನ್ ಗಳಿಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬೇಲ್ಸ್ ಎಗರಿಸಿದರು. ಜಡೇಜ ಕ್ರೀಸ್ನಲ್ಲಿ ನೆಲೆಯೂರಿ 30 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ 35 ರನ್ ಕಲೆಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.