ಹುಬ್ಬಳ್ಳಿ: ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಎಡವಟ್ಟು ಮಾಡಿಕೊಂಡಿರುವ ಕರ್ನಾಟಕ ತಂಡಕ್ಕೆ ಮಧ್ಯಪ್ರದೇಶ ಸವಾಲಿನ ಗುರಿ ನೀಡಿದೆ. ಆದ್ದರಿಂದ ರಾಜ್ಯ ತಂಡ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದೆ.
ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಒಟ್ಟು 410 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಈ ತಂಡದ್ವಿತೀಯ ಇನಿಂಗ್ಸ್ನಲ್ಲಿ 87.4 ಓವರ್ಗಳಲ್ಲಿ 263 ರನ್ ಕಲೆ ಹಾಕಿತು. ಪ್ರಥಮ ಇನಿಂಗ್ಸ್ನಲ್ಲಿ 147 ರನ್ ಮುನ್ನಡೆ ಸಂಪಾದಿಸಿತ್ತು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಶುಕ್ರವಾರದ ಅಂತ್ಯಕ್ಕೆ 29 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿದೆ.
ಗುರಿ ಮುಟ್ಟಲು ಕೊನೆಯ ದಿನವಾದ ಶನಿವಾರ 341 ರನ್ ಕಲೆ ಹಾಕಬೇಕು. ಇಲ್ಲವೇ ಪಂದ್ಯ ಡ್ರಾ ಮಾಡಿಕೊಳ್ಳಲು ಪೂರ್ತಿ ದಿನದಾಟ ಬ್ಯಾಟಿಂಗ್ ಮಾಡಬೇಕು.
‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಮೊದಲ ಐದು ಸ್ಥಾನ ಗಳಿಸಿರುವ ಪಂಜಾಬ್ (39 ಪಾಯಿಂಟ್ಸ್), ಬಂಗಾಳ (36), ಮುಂಬೈ (35), ಗುಜರಾತ್ (32) ಮತ್ತು ಉತ್ತರ ಪ್ರದೇಶ (32) ಈಗಾಗಲೇ ನಾಕೌಟ್ನಲ್ಲಿ ಸ್ಥಾನ ಪಡೆದುಕೊಂಡಿವೆ.
ಮೂರೂ ದಿನ ಮಧ್ಯಮ ವೇಗದ ಬೌಲರ್ಗಳಿಗೆ ಪಿಚ್ ಅನುಕೂಲಕಾರಿಯಾಗಿತ್ತು. ಶನಿವಾರ ಮಧ್ಯಪ್ರದೇಶದ ಬಲಿಷ್ಠ ಬೌಲಿಂಗ್ ಎದುರಿಸಿ ಆಡಬೇಕಾದ ಸವಾಲು ರಾಜ್ಯದ ಬ್ಯಾಟ್ಸ್ಮನ್ಗಳ ಮುಂದಿದೆ.
ಸಂಕ್ಷಿಪ್ತ ಸ್ಕೋರು: ಮಧ್ರಪ್ರದೇಶ ಮೊದಲ ಇನಿಂಗ್ಸ್ 95.2 ಓವರ್ಗಳಲ್ಲಿ 273 ಮತ್ತು ದ್ವಿತೀಯ ಇನಿಂಗ್ಸ್ 87.4 ಓವರ್ಗಳಲ್ಲಿ 263 (ನಿಖಿಲ್ ಮಿಶ್ರಾ 93, ಸಲ್ಮಾನ್ ಖಾನ್ 65, ರಾಹುಲ್ ಬಾಥಮ್ 20, ರಾಜರ್ಷಿ ಶ್ರೀವಾತ್ಸವ 24; ಮನೋಜ ಭಂಡಗೆ 47ಕ್ಕೆ4, ರಾಜರ್ಷಿ ಶ್ರೀವಾತ್ಸವ 20ಕ್ಕೆ1, ಅಭಯ್ ಟಿಪ್ಸನ್ 13ಕ್ಕೆ5). ಕರ್ನಾಟಕ ಮೊದಲ ಇನಿಂಗ್ಸ್ 42.4 ಓವರ್ಗಳಲ್ಲಿ 126 ಮತ್ತು ದ್ವಿತೀಯ ಇನಿಂಗ್ಸ್ 29 ಓವರ್ಗಳಲ್ಲಿ 1 ವಿಕೆಟ್ಗೆ 70 (ಅಂಕಿತ್ ಉಡುಪ ಬ್ಯಾಟಿಂಗ್ 35, ಸುಜಿತ್ ಎನ್. ಗೌಡ ಬ್ಯಾಟಿಂಗ್ 35; ಅನುಭವ ಅಗರವಾಲ್ 8ಕ್ಕೆ1).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.