ನವದೆಹಲಿ: ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸಭೆಯು ಶುಕ್ರವಾರ ನಡೆಯಲಿದೆ.
‘ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಪಾಕ್ ಎದುರಿನ ಪಂದ್ಯ ಬಹಿಸ್ಕರಿಸುವ ಸಾಧಕ–ಬಾಧಕಗಳು ಮತ್ತು ಸಾಧ್ಯತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಹೇಳಿದ್ದಾರೆ.
ಆದರೆ, ಭಾರತ –ಪಾಕ್ ಪಂದ್ಯದ ಕುರಿತು ಐಸಿಸಿಗೆ ಸಲ್ಲಿಸಲು ಇದುವರೆಗೂ ಬಿಸಿಸಿಐ ಮತ್ತು ಸಿಒಎ ಯಾವುದೇ ಪತ್ರವನ್ನು ಸಿದ್ಧಪಡಿಸಿಲ್ಲವೆನ್ನಲಾಗಿದೆ.
‘ಭಾರತವು ಐಸಿಸಿಗೆ ಪಾಕ್ ತಂಡವನ್ನು ವಿಶ್ವಕಪ್ ಟೂರ್ನಿಯಿಂದ ಕೈಬಿಡಲು ಪತ್ರ ಬರೆಯಬಹುದು. ಆದರೆ, ಐಸಿಸಿಯು ಅದನ್ನು ನಿರಾಕರಿಸುವ ಸಾಧ್ಯತೆಯೇ ಹೆಚ್ಚಿದೆ. ಐಸಿಸಿ ನಿಯಮದ ಪ್ರಕಾರ ಯಾವುದೇ ದೇಶದ ತಂಡವು ಟೂರ್ನಿಯಲ್ಲಿ ಭಾಗವಹಿಸುವ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸರ್ವಸದಸ್ಯರ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಸಲ್ಲಿಸಬಹುದು. ಆದರೆ, ಬೇರೆಲ್ಲ ಸದಸ್ಯ ರಾಷ್ಟ್ರಗಳು ಬಿಸಿಸಿಐಯನ್ನು ಬೆಂಬಲಿಸುವ ಸಾಧ್ಯತೆಗಳು ಕಡಿಮೆ ಇದೆ. ನಮಗೆ ಬಹುಮತ ಸಿಗುವುದೂ ಕಷ್ಟ. ಆದರೆ, ಎಲ್ಲ ಸಾಧ್ಯತೆಗಳನ್ನೂ ಅವಲೋಕಿಸಿದ ನಂತರ ಮುಂದಿನ ವಿಚಾರ’ ಎಂದು ಎಡುಲ್ಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.