ಮುಂಬೈ: ಚೆಂಡಿಗೆ ಹೊಳಪು ನೀಡಲು ಎಂಜಲು ಬಳಕೆ ನಿಷೇಧಿಸಿರುವುದರಿಂದ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚು ನ್ಯಾಯೋಚಿತವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ.
ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಚೆಂಡಿಗೆ ಎಂಜಲು ಉಜ್ಜಿ ಹೊಳಪು ನೀಡುವುದನ್ನು ನಿಷೇಧಿಸಿರುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ ತಿಳಿಸಿತ್ತು.
‘ಟೆಸ್ಟ್ ಪಂದ್ಯಗಳಲ್ಲಿ ಬೌಲರ್ವೊಬ್ಬ ಕೆಂಪು ಚೆಂಡನ್ನು ಹೊಳೆಯುವಂತೆ ಮಾಡದಿದ್ದರೆ ಅದು ಸ್ವಿಂಗ್ ಆಗುವುದಿಲ್ಲ. ಆಗ ಬ್ಯಾಟ್ಸ್ಮನ್ ಕೆಲಸ ಸುಲಭವಾಗುತ್ತದೆ. ಸ್ಪರ್ಧೆಯು ನ್ಯಾಯಯುತವಾಗಿರಬೇಕು. ಬ್ಯಾಟ್ಸ್ಮನ್ನರ ಪ್ರಾಬಲ್ಯ ಮಾತ್ರ ಇರಬಾರದು’ ಎಂದು ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಇಶಾಂತ್ ಹೇಳಿದ್ದಾರೆ. 31 ವರ್ಷದ ಇಶಾಂತ್ 97 ಟೆಸ್ಟ್ಗಳಲ್ಲಿ ಆಡಿದ ಅನುಭವಿಯಾಗಿದ್ದಾರೆ.
‘ಎಂಜಲು ಬಳಕೆಯನ್ನು ಬೌಲರ್ಗಳು ನಿಲ್ಲಿಸಬೇಕೆಂದರೆ ಅದಕ್ಕಾಗಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಟೆಸ್ಟ್ನಲ್ಲಿ 297 ಹಾಗೂ ಏಕದಿನ ಪಂದ್ಯಗಳಲ್ಲಿ 115 ವಿಕೆಟ್ ಗಳಿಸಿರುವ ಇಶಾಂತ್ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.