ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ಅನ್ವಯ್‌ ದ್ರಾವಿಡ್‌ ಪಡೆಗೆ ಇನಿಂಗ್ಸ್‌ ಜಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 18:33 IST
Last Updated 12 ಡಿಸೆಂಬರ್ 2025, 18:33 IST
ರತನ್‌ ಬಿ.ಆರ್.
ರತನ್‌ ಬಿ.ಆರ್.   

ಬೆಂಗಳೂರು: ಎಡಗೈ ಸ್ಪಿನ್ನರ್‌ ರತನ್‌ ಬಿ.ಆರ್‌. (55ಕ್ಕೆ6) ಅವರ ಕೈಚಳಕದ ನೆರವಿನಿಂದ ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಇನಿಂಗ್ಸ್‌ ಹಾಗೂ 53 ರನ್‌ಗಳ ಗೆಲುವು ಸಾಧಿಸಿತು. ಅದರೊಂದಿಗೆ ಅನ್ವಯ್‌ ದ್ರಾವಿಡ್‌ ಪಡೆಯು ಪಾಯಿಂಟ್ಸ್‌ ಪಟ್ಟಿಯಲ್ಲಿ 20 ಅಂಕಗಳೊಡನೆ ಸಿ ಗುಂಪಿನ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿತು.

ಒಡಿಶಾದ ಬಲಾಂಗಿರ್‌ನಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಶುಕ್ರವಾರ, 7 ವಿಕೆಟ್‌ಗೆ 211 ರನ್‌ಗಳೊಂದಿಗೆ ಆಟ ಮುಂದುವರಿಸಿದ ಒಡಿಶಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 77.5 ಓವರ್‌ಗಳಲ್ಲಿ 246 ರನ್‌ಗಳಿಗೆ ಕುಸಿಯಿತು.

ದಿನದ ಆರಂಭದಲ್ಲಿಯೇ ಆಲ್‌ರೌಂಡರ್‌ ಅರ್ಪಿತ್‌ ಮೊಹಾಂತಿ (44 ರನ್‌; 90 ಎಸೆತ) ಅವರನ್ನು ರತನ್‌ ಎಲ್‌ಬಿಡಬ್ಲ್ಯೂ ಬಲೆಗೆ ಕಡವಿದರು. ನಂತರ ಬಂದ ಪಿಯೂಷ್‌ ರಂಜನ್‌ ಮಂತ್ರಿ (6; 8 ಎ; 4x1) ಅವರು ರತನ್‌ ಬೌಲಿಂಗ್‌ನಲ್ಲಿ ಧ್ಯಾನ್‌ ಎಂ. ಹಿರೇಮಠ ಅವರಿಗೆ ಕ್ಯಾಚಿತ್ತರು.

ADVERTISEMENT

ಅಕ್ಷತ್‌ ಪ್ರಭಾಕರ್‌ ಅವರು ಪ್ರಿಯಾಂಶು ಮೊಹಾಂತಿ (1; 10ಎ) ಅವರನ್ನು ಬೌಲ್ಡ್‌ ಮಾಡುವುದರೊಂದಿಗೆ ಅನ್ವಯ್‌ ಪಡೆಗೆ ಇನಿಂಗ್ಸ್‌ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಒಡಿಶಾ: 58.4 ಓವರ್‌ಗಳಲ್ಲಿ 170; ಕರ್ನಾಟಕ: 126.4 ಓವರ್‌ಗಳಲ್ಲಿ 8 ವಿಕೆಟ್‌ಗೆ 469 ಡಿ.; ಎರಡನೇ ಇನಿಂಗ್ಸ್‌: ಒಡಿಶಾ: 77.5 ಓವರ್‌ಗಳಲ್ಲಿ 246 (ಅರ್ಪಿತ್‌ ಮೊಹಾಂತಿ 44, ಸಿಬುನ್‌ ನಂದಾ ಔಟಾಗದೇ 11; ರತನ್‌ ಬಿ.ಆರ್‌. 55ಕ್ಕೆ6, ಅಕ್ಷತ್‌ ಪ್ರಭಾಕರ್‌ 38ಕ್ಕೆ2).

ಫಲಿತಾಂಶ: ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಹಾಗೂ 53 ರನ್‌ಗಳ ಗೆಲುವು.

ರತನ್‌ ಬಿ.ಆರ್. (ಬಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.