ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ಮೊದಲು ಶಾಲೆ, ಕಾಲೇಜುಗಳು ಆರಂಭವಾಗಬೇಕು. ಕ್ರೀಡೆಗಳ ಆರಂಭಿಸುವ ತುರ್ತು ಬೇಡ ಎಂದು ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.
‘ನಾನು ಸಮಗ್ರವಾಗಿ ಯೋಚಿಸುತ್ತಿದ್ದೇನೆ. ಕ್ರಿಕೆಟ್ ಒಂದೇ ಈಗಿನ ಮಹತ್ವದ ವಿಷಯವೆಂದು ನಿಮಗನಿಸುತ್ತದೆಯೇ? ಆದರೆ, ಅದಕ್ಕಿಂತಲೂ ನನಗೆ ಇಂದಿನ ಮಕ್ಕಳು ಮತ್ತು ಯುವಕರ ಶಿಕ್ಷಣದ ಕುರಿತು ಚಿಂತೆಯಾಗಿದೆ. ಆದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಆದ್ಯತೆ ನೀಡಬೇಕು. ಆಮೇಲೆ ಫುಟ್ಬಾಲ್, ಕ್ರಿಕೆಟ್ ಮತ್ತಿತರ ಚಟುವಟಿಕೆಗಳು ತಾನಾಗಿಯೇ ಆರಂಭವಾಗುತ್ತವೆ’ ಎಂದು ಯೂಟ್ಯೂಬ್ ಚಾನೆಲ್ನ ಸ್ಪೋರ್ಟ್ಸ್ ಟಾಕ್ನಲ್ಲಿ ಹೇಳಿದ್ದಾರೆ.
‘ನಾವು ಭಾವನಾತ್ಮಕವಾಗಿ ಯೋಚಿಸಿ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ನಡೆಯಲಿ ಎನ್ನಬಹುದು. ಆದರೆ ಈಗ ಅಲ್ಲ. ಈ ಸ್ಥಿತಿಯಲ್ಲಿ ಅದು ತುರ್ತು ಅಗತ್ವವೂ ಅಲ್ಲ. ದುಡ್ಡಿನ ಅವಶ್ಯಕತೆ ಇದ್ದವರು ಉಭಯ ದೇಶಗಳ ಗಡಿಯಲ್ಲಿ ‘ಚಟುವಟಿಕೆ’ಗಳನ್ನು ನಿಲ್ಲಿಸಬೇಕು’ ಎಂದು ಪಾಕಿಸ್ತಾನಕ್ಕೆ ಕುಟುಕಿದರು.
ಭಾರತ –ಪಾಕ್ ಕ್ರಿಕೆಟ್ ಸರಣಿ ಆಯೋಜಿಸಿ ದುಡ್ಡು ಸಂಗ್ರಹಿಸಬೇಕು. ಅದನ್ನು ಕೊರೊನಾ ಹೋರಾಟಕ್ಕೆ ಬಳಸಬೇಕು ಎಂದು ಈಚೆಗೆ ಪಾಕ್ ಆಟಗಾರ ಶೋಯಬ್ ಅಖ್ತರ್ ಹೇಳಿದ್ದರು. ಆಗ ಕಪಿಲ್ ಅದು ಆಗದೆಂದು ತಿರುಗೇಟು ನೀಡಿದ್ದರು.
‘ಈ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಹಣದ ನೆರವು ನೀಡಲು ಧಾರ್ಮಿಕ ಸಂಸ್ಥೆಗಳು ಮುಂದಾಗಬೇಕು. ನಮ್ಮಲ್ಲಿ ಬಹಳಷ್ಟು ಧಾರ್ಮಿಕ ಸಂಸ್ಥೆಗಳಿವೆ. ಭಕ್ತರು ಏನೇಲ್ಲಾ ಕಾಣಿಕೆಗಳನ್ನು ನೀಡುತ್ತಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆ ಸಂಸ್ಥೆಗಳು ಮುಂದೆ ಬರಬೇಕು’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.