ADVERTISEMENT

IPL 2025 | ತಮ್ಮ ತಂಡಕ್ಕೆ ಪವರ್‌ಪ್ಲೇನಲ್ಲಿ 60 ರನ್ ಗಳಿಸುವುದು ಕಷ್ಟ: ಧೋನಿ

ಪಿಟಿಐ
Published 12 ಏಪ್ರಿಲ್ 2025, 2:44 IST
Last Updated 12 ಏಪ್ರಿಲ್ 2025, 2:44 IST
<div class="paragraphs"><p>ಎಂ.ಎಸ್‌. ಧೋನಿ</p></div>

ಎಂ.ಎಸ್‌. ಧೋನಿ

   

ಪಿಟಿಐ ಚಿತ್ರ

ಚೆನ್ನೈ: ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್‌) ವಿರುದ್ಧದ ಪಂದ್ಯದಲ್ಲಿ ಎದುರಾದ ಹೀನಾಯ ಸೋಲಿಗೆ ಬ್ಯಾಟರ್‌ಗಳೇ ಕಾರಣ ಎಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ, ಮುಂಬರುವ ಪಂದ್ಯಗಳಲ್ಲಿ ಸೋಲು ತಪ್ಪಿಸಲು ಉತ್ತಮ ಆಟವಾಡುವಂತೆ ಒತ್ತಾಯಿಸಿದ್ದಾರೆ.

ADVERTISEMENT

ತವರಿನ (ಚೆನ್ನೈ) ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 103 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಕೆಕೆಆರ್‌ ಕೇವಲ 10.1 ಓವರ್‌ಗಳಲ್ಲಿ 2 ವಿಕೆಟ್‌ಗೆ 107 ರನ್‌ ಗಳಿಸಿ ಜಯದ ನಗೆ ಬೀರಿತು.

ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್‌ ಎನಿಸಿರುವ ಸಿಎಸ್‌ಕೆಗೆ, ಹೆಚ್ಚು ಎಸೆತಗಳು ಬಾಕಿ ಇರುವಂತೆಯೇ ಎದುರಾದ ದೊಡ್ಡ ಸೋಲು ಇದಾಯಿತು.

ಪಂದ್ಯದ ಬಳಿಕ ಮಾತನಾಡಿರುವ ಧೋನಿ, 'ನಾವು ಅಂದುಕೊಂಡಂತೆ ನಡೆಯಲಿಲ್ಲ. ಸಾಕಷ್ಟು ಸವಾಲಿನಿಂದ ಕೂಡಿತ್ತು. ಇಂತಹ ಸವಾಲುಗಳನ್ನು ನಾವು ಸ್ವೀಕರಿಸಲೇಬೇಕು. ನಾವು ಸಾಕಷ್ಟು ರನ್ ಗಳಿಸಲಿಲ್ಲ ಎನಿಸಿತು' ಎಂದು ಹೇಳಿದ್ದಾರೆ.

'ಚೆನ್ನೈ ಪಿಚ್‌ ಸಹ ಅದಕ್ಕೆ ತಕ್ಕಂತೆಯೇ ಆಗಿದೆ. ಎರಡನೇ ಇನಿಂಗ್ಸ್‌ ಬೌಲಿಂಗ್‌ ಮಾಡವಾಗ ಚೆಂಡು ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ, ಇಂದು (ಶುಕ್ರವಾರ) ಮೊದಲ ಇನಿಂಗ್ಸ್‌ನಲ್ಲೇ ನಿಂತು ಬರಲಾರಂಭಿಸಿತು. ಸಾಕಷ್ಟು ವಿಕೆಟ್‌ ಕಳೆದಕೊಂಡಾಗ ಒತ್ತಡ ಸೃಷ್ಟಿಯಾಗುತ್ತದೆ. ಗುಣಮಟ್ಟದ ಸ್ಪಿನ್ನರ್‌ಗಳನ್ನು ಎದುರಿಸುವುದು ಕಠಿಣವಾಗುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಟೂರ್ನಿಯಲ್ಲಿ ಈವರೆಗೆ ಒಟ್ಟು ಆರು ಪಂದ್ಯಗಳಲ್ಲಿ ಆಡಿರುವ ಸಿಎಸ್‌ಕೆ, ಮೊದಲ ಪಂದ್ಯದಲ್ಲಿ ಮುಂಬೈ ಎದುರು ಜಯ ಸಾಧಿಸಿತ್ತು. ಆದರೆ, ನಂತರದ ಐದು ಪಂದ್ಯಗಳಲ್ಲಿ ಸತತವಾಗಿ ಸೋಲುಂಡಿದೆ.

ಸಿಎಸ್‌ಕೆ ಬ್ಯಾಟರ್‌ಗಳು, ಕೆಕೆಆರ್‌ ಎದುರು ಪವರ್‌ಪ್ಲೇ ಅವಧಿಯ ಆರು ಓವರ್‌ಗಳಲ್ಲಿ ಗಳಿಸಿದ್ದು 2 ವಿಕೆಟ್‌ಗೆ 31 ರನ್‌ ಮಾತ್ರ. ಬ್ಯಾಟಿಂಗ್ ಕುರಿತು ಮಾತನಾಡಿರುವ ಧೋನಿ, 'ಉತ್ತಮ ಜೊತೆಯಾಟಗಳು ಬರಲಿಲ್ಲ. ಜೊತೆಯಾಟಗಳು ಬಂದರೆ, ಪರಿಸ್ಥಿತಿಗೆ ತಕ್ಕಂತೆ ಆಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ' ಎಂದಿದ್ದಾರೆ.

'ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಟವಾಡಬೇಕು. ಅದನ್ನು ಒಂದೆರಡು ಪಂದ್ಯಗಳಲ್ಲಿ ಚೆನ್ನಾಗಿ ನಿಭಾಯಿದ್ದೇವೆ. ನಿಮ್ಮ ನಿಮ್ಮ ಸಾಮರ್ಥ್ಯಗಳಿಗೆ ಒತ್ತು ನೀಡಬೇಕು. ನಿಮ್ಮಿಂದ ಸಾಧ್ಯವಿರುವ ಹೊಡೆತಗಳನ್ನು ಪ್ರಯೋಗಿಸಿ. ಮತ್ತೊಬ್ಬರ ಪ್ರದರ್ಶನಕ್ಕೆ ಸರಿಸಮನಾಗಿ ಆಡುವ ಆಲೋಚನೆ ಬೇಡ' ಎಂದು ಬ್ಯಾಟರ್‌ಗಳಿಗೆ ಕಿವಿಮಾತು ಹೇಳಿದ್ದಾರೆ.

ಮುಂದುವರಿದು, 'ನಮ್ಮ ತಂಡದ ಆರಂಭಿಕರು ಉತ್ತಮ ಆಟಗಾರರು. ಬೀಸಾಟಕ್ಕೆ ಒತ್ತು ನೀಡುವುದಿಲ್ಲ. ಸ್ಕೋರ್‌ಕಾರ್ಡ್‌ ನೋಡಿ ಹತಾಶೆಗೊಳ್ಳದಿರುವುದೂ ಮುಖ್ಯ. ನಮ್ಮ ಬ್ಯಾಟಿಂಗ್‌ ಕ್ರಮಾಂಕದೊಂದಿಗೆ ಪವರ್‌ಪ್ಲೇ ಅವಧಿಯಲ್ಲಿ 60 ರನ್‌ ಗಳಿಸಲು ಮುಂದಾದರೆ, ತಂಡಕ್ಕೆ ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ. ಹಾಗೆಯೇ, 'ಜೊತೆಯಾಟಗಳನ್ನು ಮುಂದುವರಿಸಬೇಕು. ಹಾಗಾದರೆ, ಮಧ್ಯ ಹಾಗೂ ಕೊನೇ ಹಂತದಲ್ಲಿ ಉಪಯುಕ್ತ ಆಟವಾಡಬಹುದು. ಅದರ ಬದಲು ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡರೆ ಮಧ್ಯಮ ಕ್ರಮಾಂಕಕ್ಕೆ ಹೊರೆಯಾಗುತ್ತದೆ. ಸ್ವಲ್ಪ ಸಮಯದವರೆಗೆ ರನ್‌ ಗಳಿಕೆ ನಿಧಾನವಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಸ್‌ಕೆ ನಾಯಕರಾಗಿದ್ದ ಋತುರಾಜ್‌ ಗಾಯಕವಾಡ್‌ ಅವರ ಮೊಣಕೈ ಮೂಳೆ ಮುರಿದಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಧೋನಿ ತಂಡದ ಹೊಣೆ ಹೊತ್ತುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.