ಚೆನ್ನೈ: ನೀವು ಉತ್ತಮ ಆಟಗಾರನಲ್ಲ ಎಂದು ಧೋನಿ ಒಮ್ಮೆ ಭಾವಿಸಿದರೆ, ಆ ದೇವರೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ) ತಂಡದ ಮಾಜಿ ಆಟಗಾರ ಎಸ್.ಬದ್ರಿನಾಥ್ ಹೇಳಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತಮಿಳುನಾಡು ತಂಡದ ಪರ 10 ಸಾವಿರ ರನ್ ಕಲೆಹಾಕಿರುವ ಬದ್ರಿನಾಥ್, ಐಪಿಎಲ್ನಲ್ಲಿ ಧೋನಿ ನಾಯಕರಾಗಿರುವ ಸಿಎಸ್ಕೆ ತಂಡದಲ್ಲಿ ಆಡಿದ್ದರು.
ಧೋನಿ ನಾಯಕತ್ವದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದೆ. ಆಟಗಾರರಿಗೆ ಹೆಚ್ಚು ಅವಕಾಶಗಳನ್ನು ನೀಡುವುದು ಧೋನಿಯ ಅತಿದೊಡ್ಡ ಶಕ್ತಿ. ಒಂದು ವೇಳೆ ಧೋನಿ,ಬದ್ರಿ ಒಳ್ಳೆಯ ಆಟಗಾರ ಎಂದು ಭಾವಿಸಿದರೆ ಸರಿ. ಬದ್ರಿ ತಂಡದಲ್ಲಿರುತ್ತಾನೆ. ಆ ತೀರ್ಮಾನ ಸರಿಯಾದದ್ದು ಎನಿಸಿದರೆ, ಅದನ್ನೇ ಮುಂದುವರಿಸುತ್ತಾರೆ. ‘ನಾನು ಅವಕಾಶಗಳನ್ನು ನೀಡುತ್ತೇನೆ. ಆತ ಸಾಮರ್ಥ್ಯ ಸಾಬೀತುಪಡಿಸಲಿ’ ಎನ್ನುತ್ತಾರೆ’ ಎಂದು ಹೇಳಿದ್ದಾರೆ.
‘ಅದೇರೀತಿ ಒಂದುವೇಳೆ ಧೋನಿ ಏನಾದರೂ ನೀವು ಉತ್ತಮ ಆಟಗಾರನಲ್ಲ ಎಂದು ಭಾವಿಸಿದರೆ, ಆ ದೇವರೂ ನಿಮಗೆ ಸಹಾಯ ಮಾಡಲಾರ. ಏನೇ ಆದರೂ ಅವರು (ಧೋನಿ) ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿರುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಏನಾದರೂ ಚೆನ್ನಾಗಿ ನಡೆಯುತ್ತಿದೆ ಎಂದರೆ ಅದನ್ನು ಹಾಳು ಮಾಡದಿರುವುದು ಮುಖ್ಯ ಎಂಬುದನ್ನು ನಾನು ಧೋನಿಯಿಂದ ಕಲಿತೆ. ನಮಗೆ ಗೊತ್ತಿಲ್ಲದಿದ್ದರೂ ಏನಾದರೂ ಚೆನ್ನಾಗಿನಡೆಯುತ್ತಿದೆ ಎಂದರೆ ಅದರಲ್ಲಿ ತಲೆಹಾಕದಿರುವುದು ಉತ್ತಮ. ಸಿಎಸ್ಕೆ ಅತ್ಯುತ್ತಮ ಪ್ರಾಂಚೈಸ್ಗಳಲ್ಲಿ ಒಂದಾಗಿದೆ. ಏಕೆಂದರೆ, ನಾವು ಯಾವಾಗಲೂ ನಮ್ಮ ಕೆಲಸಗಳನ್ನು ಸರಿಯಾಗಿ ಮಾಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.